ಕಾಂಗ್ರೆಸ್ ದಲಿತರು, ಸಂವಿಧಾನ ಮತ್ತು ಅಂಬೇಡ್ಕರ್ ಪರವಲ್ಲ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿ ಪ್ರಮಾಣವನ್ನು ಕೂಡಲೇ ಹೆಚ್ಚಿಸಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ರಾಜ್ಯದಲ್ಲಿ ದೊಡ್ಡ ಆಂದೋಲನಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷವು ದಲಿತರ ಪರ, ಸಂವಿಧಾನದ ಪರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪರ ಎಂದು ಹೇಳಿಕೊಳ್ಳುತ್ತಿದ್ದರೂ ಮೀಸಲಾತಿ ವಿಷಯದಲ್ಲಿ ಅದಕ್ಕೆ ಎಳ್ಳುನೀರು ಬಿಟ್ಟಿದೆ” ಎಂದು ಆರೋಪಿಸಿದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದನ್ನು ನೆನಪಿಸಿದ ನಾರಾಯಣಸ್ವಾಮಿ, “ಆ ನಂತರ ಸುಮಾರು ಮೂರುವರೆ ವರ್ಷಗಳ ಕಾಲ ಯಾವುದೇ ತೊಂದರೆಯಿಲ್ಲದೆ ಎಲ್ಲ ಸವಲತ್ತುಗಳು ದಲಿತ ಸಮುದಾಯಕ್ಕೆ ಲಭಿಸಿವೆ” ಎಂದರು.
“ಕಾಂಗ್ರೆಸ್ ಸರಕಾರ ಉದ್ದೇಶಪೂರ್ವಕವಾಗಿ ತಡೆಹಿಡಿದಿದೆ”
ಕಾಂಗ್ರೆಸ್ ಸರಕಾರ ಮೀಸಲಾತಿ ಹೆಚ್ಚಳಕ್ಕೆ ಉದ್ದೇಶಪೂರ್ವಕವಾಗಿ ತಡೆಯುತ್ತಿದೆ ಎಂದು ಆರೋಪಿಸಿದ ಅವರು, “ಇದಕ್ಕೆ 9ನೇ ಶೆಡ್ಯೂಲ್ ಕಾರಣವಲ್ಲ. ಸರಿಯಾದ ವಾದ ಮಂಡಿಸದೇ ಇರುವುದೇ ನಿಜವಾದ ಕಾರಣ” ಎಂದು ಟೀಕಿಸಿದರು.
ಬೊಮ್ಮಾಯಿ ಸರಕಾರ ಮೀಸಲಾತಿ ಹೆಚ್ಚಿಸಿದಾಗ ಕಾಂಗ್ರೆಸ್ ನಾಯಕರು 9ನೇ ಶೆಡ್ಯೂಲ್ಗೆ ಸೇರಿಸಬೇಕಿತ್ತು ಎಂದು ಅಪಸ್ವರ ಎತ್ತಿದ್ದರು ಎಂದು ಜ್ಞಾಪಿಸಿದ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವರ ವಕೀಲ ವೃತ್ತಿಯನ್ನು ಕುರಿತು ವ್ಯಂಗ್ಯವಾಡಿದರು.
ಇತರ ರಾಜ್ಯಗಳ ಉದಾಹರಣೆ ನೀಡಿದ ನಾರಾಯಣಸ್ವಾಮಿ
ಛತ್ತೀಸ್ಗಢದಲ್ಲಿ ಶೇ. 58 ಮೀಸಲಾತಿ ಅನುಮತಿಸಲಾಗಿದೆ ಮತ್ತು ತಮಿಳುನಾಡು ಶೇ. 69 ಮೀಸಲಾತಿ ಜಾರಿಗೊಳಿಸಿದೆ ಎಂದು ಉಲ್ಲೇಖಿಸಿದ ಅವರು, ಎಸ್ಸಿ-ಎಸ್ಟಿ ಮೀಸಲಾತಿ ಜನಸಂಖ್ಯೆಗೆ ಅನುಗುಣವಾಗಿರಬೇಕು ಎಂದು ಹೇಳಿದರು.
ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಆರೋಪಿಸಿದ ಅವರು, “ಆ ಶಿಫಾರಸುಗಳನ್ನು ಒಪ್ಪಿ ನಾವು ಮೀಸಲಾತಿ ಹೆಚ್ಚಿಸಿದ್ದೆವು. ಈಗ ಕಾಂಗ್ರೆಸ್ಗೆ ಇಚ್ಛೆಯಿಲ್ಲ” ಎಂದು ದೂರಿದರು.
ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುವ ಯಾವುದೇ ಸಂಘಟನೆಯ ಹೋರಾಟಕ್ಕೂ ಬಿಜೆಪಿ ಬೆಂಬಲ ನೀಡುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಪ್ರಕಟಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ಉಪಾಧ್ಯಕ್ಷ ರಾಜುಗೌಡ ನಾಯಕ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸದಾಸ ಕರಿಯಪ್ಪ ಉಪಸ್ಥಿತರಿದ್ದರು.












