ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ಕಾಂಗ್ರೆಸ್ ಶಾಸಕರ ಜತೆ ನಡೆಸುತ್ತಿರುವ ಸಭೆಯು ಪಕ್ಷ ಸಂಘಟನೆ ಮತ್ತು ಶಾಸಕರ ಅಹವಾಲು ಸ್ವೀಕಾರಕ್ಕೆ ಸೀಮಿತವಾಗಿದ್ದು, ಮುಖ್ಯಮಂತ್ರಿ ಬದಲಾವಣೆ ಅಥವಾ ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್, “ರಣದೀಪ್ ಸಿಂಗ್ ಸುರ್ಜೆವಾಲ ಅವರ ಸಭೆಯಿಂದ ಯಾರೂ ಆತಂಕಗೊಳ್ಳಬೇಕಿಲ್ಲ. ಈ ವರ್ಷವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಘಟನೆ ವರ್ಷ ಎಂದು ಘೋಷಿಸಿದ್ದಾರೆ. ರಾಷ್ಟ್ರಾದ್ಯಂತ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಭೆಯು ಪಕ್ಷ ಸಂಘಟನೆಗೆ ಮಾರ್ಗದರ್ಶನ ನೀಡಲು ಮತ್ತು ಶಾಸಕರ ಅಹವಾಲುಗಳನ್ನು ಆಲಿಸಲು ಆಯೋಜಿಸಲಾಗಿದೆ” ಎಂದರು.
“ದೆಹಲಿಯಲ್ಲಿ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸಭೆ ನಡೆಸಿ, ಕಾಂಗ್ರೆಸ್ ಕಚೇರಿ ನಿರ್ಮಾಣದಿಂದ ಹಿಡಿದು ಪಕ್ಷ ಸಂಘಟನೆಯವರೆಗೆ ಜವಾಬ್ದಾರಿಗಳನ್ನು ವಿವರಿಸಲಾಗಿದೆ. ಬೆಂಗಳೂರಿನಲ್ಲಿ ಶಾಸಕರಿಲ್ಲದ ಕ್ಷೇತ್ರಗಳ ಜವಾಬ್ದಾರಿಯನ್ನು ಶಾಸಕರಿಗೆ ವಹಿಸಲಾಗಿದೆ. ಸುರ್ಜೆವಾಲ ಅವರು ಶಾಸಕರಿಂದ ಅಹವಾಲು ಸ್ವೀಕರಿಸುವ ಜತೆಗೆ, ಕೆಲವು ಶಾಸಕರ ಹೇಳಿಕೆಗಳಿಂದ ಉಂಟಾದ ಗೊಂದಲವನ್ನು ತಡೆಯಲು ಪಕ್ಷದಲ್ಲಿ ಶಿಸ್ತು ತರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ಅಥವಾ ಸಂಪುಟ ವಿಸ್ತರಣೆಯಂತಹ ವಿಷಯಗಳ ಬಗ್ಗೆ ಯಾವುದೇ ಚರ್ಚೆ ಇಲ್ಲ. ನಮ್ಮ ಗಮನ 2028ರ ಚುನಾವಣೆಯ ಮೇಲಿದೆ” ಎಂದು ತಿಳಿಸಿದರು.
ಇಕ್ಬಾಲ್ ಹುಸೇನ್ಗೆ ನೋಟೀಸ್
“ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ ಎಂಬ ಪ್ರಶ್ನೆಗೆ, “ಅವರಿಗೆ ನಾನೇ ನೋಟೀಸ್ ನೀಡುತ್ತೇನೆ. ಯಾರೂ ಮಾಧ್ಯಮಗಳ ಮುಂದೆ ಈ ರೀತಿ ಮಾತನಾಡಬಾರದು. ಇಕ್ಬಾಲ್ ಹುಸೇನ್, ಬಿ.ಆರ್. ಪಾಟೀಲ್, ಬಾಲಕೃಷ್ಣ ಯಾರೇ ಆಗಲಿ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು, ನಾವೆಲ್ಲರೂ ಅವರ ಕೈ ಬಲಪಡಿಸಬೇಕು” ಎಂದು ಶಿವಕುಮಾರ್ ತಾಕೀತು ಮಾಡಿದರು.
ಅಭಿವೃದ್ಧಿಗೆ 1 ಲಕ್ಷ ಕೋಟಿ ಮೀಸಲು
ಶಾಸಕ ಬಿ.ಆರ್. ಪಾಟೀಲ್ ಅವರು ಅನುದಾನದ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ, “ರಾಜ್ಯ ಸರ್ಕಾರವು ಬಜೆಟ್ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ 1 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಗ್ಯಾರಂಟಿ ಯೋಜನೆಗಳಿಗೆ 54 ಸಾವಿರ ಕೋಟಿ, ರೈತರಿಗೆ ವಿದ್ಯುತ್ ಸರಬರಾಜಿಗೆ 19 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದೆ. ಸಾಮಾಜಿಕ ಕಲ್ಯಾಣ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಇವೆಲ್ಲವೂ ಜನರ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದವು. ನಮ್ಮ ರಾಜ್ಯದ ಕಲ್ಯಾಣ ಯೋಜನೆಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ” ಎಂದು ವಿವರಿಸಿದರು.
ಮಾಲೂರು ಶಾಸಕ ನಂಜೇಗೌಡರಿಗೆ ಕೆಎಂಎಫ್ ಸ್ಥಾನ ಕೊಡಿಸುವ ಬಗ್ಗೆ ಚರ್ಚೆ ಎಂಬ ಪ್ರಶ್ನೆಗೆ, “ರಾಜಕೀಯ ಮತ್ತು ಸಹಕಾರ ಕ್ಷೇತ್ರವು ಬೇರೆ ಬೇರೆ. ಈ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ” ಎಂದು ತಿಳಿಸಿದರು.