- ಮುದ್ರಾ, ವಿಶ್ವಕರ್ಮ ಯೋಜನೆಗಳು ಜನರಿಗೆ ತಲುಪದಿದ್ದರೆ ಹೇಗೆ?
- ನೈಜ ಫಲಾನುಭವಿಗಳನ್ನು ಗುರುತಿಸಿ, ಕೇಂದ್ರ ಯೋಜನೆಗಳನ್ನು ತಲುಪಿಸಿ
- ಮೈಸೂರು ದಿಶಾ ಸಮಿತಿ ಸಭೆಯಲ್ಲಿ HDK
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಜನೋಪಯೋಗಿ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ಮೈಸೂರಿನಲ್ಲಿ ಶನಿವಾರ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆದ ನಂತರ ಅವರು ಮಾತನಾಡಿದರು.
ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಒಟ್ಟಾಗಿ ಹೋಗಬೇಕು. ಪರಸ್ಪರ ಸಹಭಾಗಿತ್ವ, ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು. ಈ ಹೊಂದಾಣಿಕೆಯಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದು. ಇಂತಹ ಉತ್ತಮ ಹೊಂದಾಣಿಕೆ ಇದ್ದರೆ ಮೈಸೂರಿನ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸುವುದು, ಹೆದ್ದಾರಿ – ರೇಲ್ವೆ ಯೋಜನೆಗಳ ಅನುಷ್ಠಾನ ಸುಲಭವಾಗುತ್ತದೆ ಎಂದು ಅವರು ಹೇಳಿದರು.
ಆರ್ಥಿಕವಾಗಿ ದುರ್ಬಲರಾಗಿರುವ ಬಡ ಕುಟುಂಬಗಳಿಗೆ ನೆರವಾಗಬೇಕು, ಅವರ ಆರ್ಥಿಕ ಶಕ್ತಿ ಬಲಪಡಿಸಲು ಕೇಂದ್ರ – ರಾಜ್ಯ ಸರಕಾರಗಳು ಪ್ರತ್ಯೇಕ ಕಾರ್ಯಕ್ರಮಗಳನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೂಡ ಗುರಿ ನಿಗದಿ ಮಾಡಿದೆ. ಅರ್ಜಿಗಳನ್ನು ಗುರುತಿಸಿ, ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಿ. ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು ಇಚ್ಛಾಶಕ್ತಿ ಇರುವ ಜನರನ್ನು ಬೆಂಬಲಿಸಿ ನೆರವಾಗಿ ಎಂದು ಅವರು ಹೇಳಿದರು.
ಬಾಗಲಕೋಟೆ ಭಾಗದಲ್ಲಿ ದ್ರಾಕ್ಷಿ ಬೆಳೆಯುವ ರೈತರು ಕ್ಲಸ್ಟರ್ ಗಳನ್ನು ಮಾಡಿಕೊಂಡಿದ್ದಾರೆ. ಅವರಿಗೆ ಶೇಕಡಾ70ರಿಂದ 90ರಷ್ಟು ಸಬ್ಸಿಡಿ ಸಿಗುತ್ತಿದೆ. ಸಂಘಟಿತ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಮುದ್ರಾ, ವಿಶ್ವಕರ್ಮ, ಎನ್ ಆರ್ ಎಲ್ ಎಂ ಇತ್ಯಾದಿ ಯೋಜನೆಗಳಿಗೆ ಒತ್ತು ಕೊಟ್ಟು ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಪ್ರಯತ್ನ ಮಾಡಿ. ಗಿರಿಜನರಿಗೆ ಅನೇಕ ಒಳ್ಳೆಯ ಕಾರ್ಯಕ್ರಮಗಳು ಇವೆ. ಕೇಂದ್ರ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಅಧಿಕಾರಿಗಳು ಹೆಚ್ಚು ಆಸಕ್ತಿ ತೋರಿಸಿ ಕೆಲಸ ಮಾಡಿ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು ಕೇಂದ್ರ ಸಚಿವರು.
ಪ್ರತೀ ದಿನ ನೀವು ಕೆಲಸ ಆರಂಭಿಸಿ ಸಂಜೆ ಮನೆಗೆ ಹೋಗುವುದರೊಳಗೆ ನಾಲ್ಕು ಜನರಿಗೆ ಸಹಾಯ ಮಾಡಿದರೆ ನಿಮಗೂ ಆತ್ಮತೃಪ್ತಿ ಎನ್ನುವುದು ದೊರೆಯುತ್ತದೆ. ಜನಸೇವೆಯೇ ಜನಾರ್ಧನ ಸೇವೆ. ನಾನೇನು ಉಪದೇಶ ಮಾಡುತ್ತಿಲ್ಲ. ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದರು.
ಯುವಕರು ದಾರಿ ತಪ್ಪುತ್ತಿದ್ದಾರೆ:
ಕೆಲಸ ಸಿಗದೆ ಯುವಕರು ದಾರಿ ತಪ್ಪುತ್ತಿದ್ದಾರೆ. ದುಡಿಯುವ ಸಮಯದಲ್ಲಿ ಅವರಿಗೆ ಕೆಲಸ ಸಿಗುತ್ತಿಲ್ಲ. ಹಿರಿಯರಿಗೆ ಅವರು ಭಾರವಾಗುವ ಪರಿಸ್ಥಿತಿ ಬಂದಿದೆ. ಕೆಲಸ ಇಲ್ಲದ ಕಾರಣಕ್ಕೆ ಯುವ ಮನಸು ಎಲ್ಲೆಲ್ಲೂ ಹೋಗುತ್ತಿದೆ. ಅವರಲ್ಲಿ ಸ್ವಂತ ದುಡಿಮೆ ಮಾಡುವ ಆಸಕ್ತಿ ಉಂಟು ಮಾಡಬಹುದು. ಮುಖ್ಯವಾಗಿ ಕೌಶಲ್ಯ ಅಭಿವೃದ್ಧಿ ಇಲಾಖೆಗೆ ಹೆಚ್ಚು ಜವಾಬ್ದಾರಿ ಇದೆ. ಯುವಕರಿಗೆ ಹೆಚ್ಚು ಪ್ರಮಾಣದಲ್ಲಿ ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಅವರು ಪ್ರತಿಪಾದಿಸಿದರು.
ಕೇಂದ್ರ, ರಾಜ್ಯ ಎನ್ನುವುದು ಬೇಡ. ನಾವೆಲ್ಲರೂ ನಿಮ್ಮ ಜತೆಯಲ್ಲಿ ಇದ್ದೇವೆ. ಜನರ ಕೆಲಸಗಳು ಆಗಬೇಕು. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ, ನಮ್ಮ ಇಬ್ಬರು ಸಂಸದರು, ಶಾಸಕರ ಗಮನಕ್ಕೆ ತನ್ನಿ, ನಿಮ್ಮ ಜತೆ ನಾವು ಇರುತ್ತೇವೆ. ರಾಜ್ಯಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ನಾವು ಸಹಕಾರ ಕೊಡುತ್ತೇವೆ ಎಂದು ಅವರು ಅಧಿಕಾರಿಗಳಿಗೆ ಭರವಸೆ ನೀಡಿದರು.
ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು; ಈ ಯೋಜನೆಗೆ ಅಗತ್ಯವಾದ ಭೂಮಿ ಸ್ವಾಧೀನ ಮಾಡಿಕೊಂಡು ಹಸ್ತಾಂತರ ಮಾಡಿ ಹಾಗೂ ಸಾಗನಹಳ್ಳಿ ರೇಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಅಗತ್ಯವಾದ ಭೂಮಿಯನ್ನು ಆದಷ್ಟು ಬೇಗ ಪಡೆದು ರೇಲ್ವೆ ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದು ಸೂಚಿಸಿದರು.
ಜಲಜೀವನ್ ಮಿಶನ್ ಯೋಜನೆ ಅನುಷ್ಠಾನ ಆಗಿದೆ ಸರಿ, ಎಷ್ಟು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿದೆ ಎನ್ನುವುದು ಪ್ರಶ್ನೆ. ಹಲವಾರು ಕಡೆ ಜಲಜೀವನ್ ಯೋಜನೆಯ ನೀರೇ ಹೋಗುತ್ತಿಲ್ಲ, ಅಲ್ಲಿ ಪೈಪ್ ಹಾಕಿದ್ದಾರೆ, ನಲ್ಲಿ ಹಾಕಿದ್ದಾರೆ. ಎಲ್ಲಾ ಹಳ್ಳಿಗಳಿಗೆ ನೀರು ಹೋಗುತ್ತಿದೆಯೇ ಎಂದು ಸಚಿವರು ಕೇಳಿದರು.
ಶುದ್ಧ ನೀರಿನ ಪೂರೈಕೆ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಖಾತರಿ ಇರಬೇಕು. ಎಲ್ಲಿಯೂ ಶುದ್ಧ ನೀರಿಗೆ ಕೊಳಚೆ ನೀರು ಸೇರಬಾರದು. ಪೈಪ್ ಲೈನ್ ಮೇಲೆ ಸದಾ ನಿಗಾ ಇರಬೇಕು. ಆರೋಗ್ಯದ ದೃಷ್ಟಿ ಕಾರಣಕ್ಕೆ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇಲ್ಲವಾದರೆ ಇಡೀ ಗ್ರಾಮಗಳೇ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿದೆ ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟರು.
ಅಮೃತ್ ಯೋಜನೆಯಡಿ ಪೈಪ್ ಲೈನ್ ಹಾಕಲಿಕ್ಕೆ ನೆಲ ಅಗೆಯುತ್ತಿರಿ, ಅದನ್ನು ಸರಿಯಾಗಿ ಮುಚ್ಚಲ್ಲ ಎನ್ನುವ ದೂರು ಎಲ್ಲಾ ಕಡೆ ಇದೆ ಎಂದ ಸುನಿಲ್ ಬೋಸ್ ಅವರ ಮಾತಿಗೆ ದನಿಗೂಡಿಸಿದ ಸಚಿವರು; ಸರಿಯಾಗಿ ನೆಲ ಮುಚ್ಚಬೇಕು. ಹಳ್ಳಿಗಳಲ್ಲಿ ಮಕ್ಕಳು, ವೃದ್ಧರು ಸುರಕ್ಷಿತವಾಗಿ ಸಂಚಾರ ಮಾಡಬೇಕು, ಮಳೆ ಬಿದ್ದಾಗ ರಸ್ತೆಯಲ್ಲಿ ಗುಂಡಿಗಳು ಬೀಳುತ್ತವೆ. ಇದು ಬಹಳ ಅಪಾಯಕಾರಿ ಎಂದ ಸಚಿವರು ಎಚ್ಚರಿಕೆ ನೀಡಿದರು.
ಪ್ರಧಾನಮಂತ್ರಿ ವಿಶ್ವಕರ್ಮ ಹಾಗೂ ಮುದ್ರಾ ಯೋಜನೆಗಳ ಮಾಹಿತಿ ಪಡೆದುಕೊಂಡ ಸಚಿವರು; ಜನರು ಆರ್ಥಿಕ ಸಹಾಯಕ್ಕಾಗಿ ಅರ್ಜಿ ಹಾಕುತ್ತಿದ್ದಾರೆ. ಸರ್ಕಾರದಿಂದ ದೊರೆಯುವ ಸಾಲದಿಂದ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಅವರು ಅರ್ಜಿಗಳನ್ನು ಹಾಕುತ್ತಿದ್ದಾರೆ. ಆದರೆ, ಅನೇಕ ಕಡೆ ಈ ಅರ್ಜಿಗಳು ತಿರಸ್ಕೃತ ಆಗುತ್ತಿವೆ. ಯಾಕೆ ತಿರಸ್ಕೃತ ಆಗುತ್ತಿವೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ವಂಶ ಪಾರಂಪರ್ಯವಾಗಿ ಒಂದೇ ವೃತ್ತಿಯಲ್ಲಿ ಇದ್ದರೆ ಮಾತ್ರ ವಿಶ್ವಕರ್ಮ ಯೋಜನೆಯ ಸೌಲಭ್ಯ ಸಿಗುತ್ತದೆ. ಇಲ್ಲವಾದರೆ ಅರ್ಜಿ ತಿರಸ್ಕೃತ ಆಗುತ್ತದೆ. ಕೇವಲ ಟೈಲರಿಂಗ್ ಗಾಗಿ ಎಂದು ಹೇಳಿಕೊಂಡವರಿಗೆ ಸಾಲ ಸಿಗುತ್ತಿಲ್ಲ, ನೈಜ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಯತ್ನಿಸಿದರು. ಇದಕ್ಕೆ ಒಪ್ಪದ ಸಚಿವರು; ಅರ್ಹ ಫಲಾನುಭವಿಗಳನ್ನು ಗುರುತಿಸಿ. ವಿಶ್ವಕರ್ಮ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ. ಅಧಿಕಾರಿಗಳು ನೈಜ ಫಲಾನುಭವಿಗಳ ಅರ್ಜಿಗಳು ತಿರಸ್ಕೃತ ಆಗದಂತೆ ನೋಡಿಕೊಳ್ಳಬೇಕು, ಕೂಲಂಕುಷವಾಗಿ ಪರಿಶೀಲನೆ ಮಾಡಬೇಕು ಎಂದು ತಾಕೀತು ಮಾಡಿದರು.
ಪಿಎಂ ವಿಶ್ವಕರ್ಮ ಯೋಜನೆ ಸೌಲಭ್ಯ ಕೇಳಿಕೊಂಡು ನನ್ನ ಬಳಿಗೆ ಜನ ಬರುತ್ತಾರೆ. ಸಾಲ ಸಿಗುತ್ತಿಲ್ಲ ಎಂದು ಎಲ್ಲರೂ ದೂರುತ್ತಿದ್ದಾರೆ. ಅಧಿಕಾರಿಗಳು ಸೇರಿ ಒಂದು ಸಭೆ ಮಾಡಿ. ಇದು ಪ್ರಧಾನಿಗಳ ಬಹುದೊಡ್ಡ ಕಾರ್ಯಕ್ರಮ, ಅವರು ದೂರದೃಷ್ಟಿ ಇಟ್ಟುಕೊಂಡು ಮಾಡಿದ್ದಾರೆ. ಅದು ಜನರಿಗೆ ತಲುಪದಿದ್ದರೆ ಉಪಯೋಗ ಏನು? ಎಂದು ಸಚಿವರು ಕಿಡಿಕಾರಿದರು.
ಪಿಎಂ ಮುದ್ರಾ ಯೋಜನೆ ಬಗ್ಗೆಯೂ ಮಾಹಿತಿ ಪಡೆದುಕೊಂಡ ಕೇಂದ್ರ ಸಚಿವರು; ಈ ಯೋಜನೆಯಲ್ಲಿ ಸಾಲ ಸಿಗುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ ನೀಡಲಾಗಿದೆ ಎಂದು ಅಂಕಿ ಅಂಶ ಇದ್ದರೂ ಜನರು ಹೋದ ಕಡೆಯೆಲ್ಲಾ ದೂರು ಹೇಳುತ್ತಾರೆ ಯಾಕೆ? ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟರು ಸಚಿವರು.
ಹೊಸ ತಳಿ ಹತ್ತಿ ಪರಿಚಯಿಸಿ:
ಮೈಸೂರು ಭಾಗದಲ್ಲಿ ಹತ್ತಿ ಬೆಳೆಯುವ ಪ್ರಮಾಣ ಕಡಿಮೆ ಆಗಿದೆ, ಯಾಕೆ? ಎಂದು ಸಚಿವರು ಪ್ರಶ್ನಿಸಿದರು.
ಹಿಂದೆ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿತ್ತು. ಈಗ ಕೇವಲ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತಿದೆ ಎಂಬ ಮಾಹಿತಿ ನನಗಿದೆ. ಹತ್ತಿಯಲ್ಲಿ ಹೆಚ್ಚು ಫಸಲು ಕೊಡುವ ಹೊಸ ತಳಿ ಬಂದಿದೆ. ರಾಯಚೂರು ಜಿಲ್ಲೆಯಲ್ಲಿ ಅದನ್ನು ಬೆಳೆಯಲಾಗುತ್ತಿದೆ. ಒಳ್ಳೆಯ ಇಳುವರಿ ಬರುತ್ತಿದೆ. ಲಾಭದಾಯಕವಾಗಿದೆ, ಇಲ್ಲಿ ಆ ಹತ್ತಿ ತಳಿಯನ್ನು ಪರಿಚಯ ಮಾಡಿ, ರೈತರಿಗೆ ಮಾಹಿತಿ ಕೊಡಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸಚಿವರು ನಿರ್ದೇಶನ ನೀಡಿದರು.
ಸಾಮಾಜಿಕ ಅರಣ್ಯೀಕರಣ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಕೇಂದ್ರ ಸಚಿವರು; ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಸಾಮಾಜಿಕ ಅರಣ್ಯೀಕರಣ ಪ್ರಮಾಣ ಕಡಿಮೆ ಎನ್ನುವ ವರದಿ ಇದೆ. ಮೈಸೂರು ಭಾಗದಲ್ಲಿ ಅರಣ್ಯ ಬೆಳೆಯುವ ಪ್ರಮಾಣ ಹೆಚ್ಚಾಗಬೇಕು. ನೆಡುವ ಗಿಡಗಳನ್ನು ಮುತುವರ್ಜಿಯಿಂದ ಪೋಷಣೆ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.
ಮೈಸೂರು -ಕೊಡಗು ಲೋಕಸಭೆ ಕ್ಷೇತ್ರದ ಸಂಸದರಾದ ಯದುವೀರ ಚಾಮರಾಜ ಒಡೆಯರ್ ಅವರು, ಚಾಮರಾಜನಗರ ಕ್ಷೇತ್ರದ ಸಂಸದರಾದ ಸುನಿಲ್ ಬೋಸ್, ಶಾಸಕರಾದ ಜಿ.ಡಿ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಹರೀಶ್ ಗೌಡ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Discover more from amiroNEWS
Subscribe to get the latest posts sent to your email.