ತಿಪಟೂರು: ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಶ್ರೀ ಗುರುಕುಲಾನಂದಾಶ್ರಮ ಸಭಾಂಗಣದಲ್ಲಿ ಇಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆ ಹಾಗೂ ದ್ವಿದಳ ರಾಷ್ಟ್ರೀಯ ಯೋಜನೆಗಳ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಮತ್ತು ಜಿಲ್ಲಾ ಕೃಷಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಈ ಎರಡು ಯೋಜನೆಗಳಿಗೆ ಚಾಲನೆ ನೀಡಿದ್ದು, ದೇಶದ ಪ್ರತಿ ಜಿಲ್ಲೆಯಲ್ಲೂ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ, 2026ರ ಕೇಂದ್ರ ಬಜೆಟ್ನಲ್ಲಿ ಈ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು. ಕೃಷಿ ಕ್ಷೇತ್ರದಲ್ಲಿ ಕಡಿಮೆ ಉತ್ಪಾದಕತೆ, ಸಮರ್ಪಕ ನೀರಾವರಿ ಕೊರತೆ, ಸಾಲದ ಲಭ್ಯತೆಯ ಕೊರತೆ, ಮತ್ತು ಕೊಯ್ಲು ನಂತರದ ಮೂಲ ಸೌಕರ್ಯದ ಕೊರತೆಯಂತಹ ಸವಾಲುಗಳನ್ನು ಎದುರಿಸಲು ಈ ಯೋಜನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರಿಗೆ ಸಮರ್ಪಿಸಿದ್ದಾರೆ ಎಂದು ಅವರು ಹೇಳಿದರು.

ಕೃಷಿ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು
2025ರ ಬಜೆಟ್ನಲ್ಲಿ ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯಡಿ 100 ಕೃಷಿ ಆಕಾಂಕ್ಷಿತ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಪ್ರಧಾನಮಂತ್ರಿ ಘೋಷಿಸಿದ್ದಾರೆ. ಕಡಿಮೆ ಇಳುವರಿಯ 100 ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಕರ್ನಾಟಕದ ತುಮಕೂರು, ಗದಗ, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಈ ಯೋಜನೆಯಡಿ ಆಯ್ಕೆಯಾಗಿವೆ. ತುಮಕೂರು ಜಿಲ್ಲೆಯ ರೈತರ ಪರವಾಗಿ ಪ್ರಧಾನಮಂತ್ರಿ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಚಿವ ಸೋಮಣ್ಣ ಧನ್ಯವಾದ ಸಲ್ಲಿಸಿದರು.
ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆಗೆ ಒತ್ತು
ದ್ವಿದಳ ಧಾನ್ಯಗಳ ರಾಷ್ಟ್ರೀಯ ಯೋಜನೆಯು ಬೆಳೆಕಾಳುಗಳಲ್ಲಿ ಆತ್ಮನಿರ್ಭರತೆ ಸಾಧಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಬೆಳೆ ವೈವಿಧ್ಯತೆಯನ್ನು ಉತ್ತೇಜಿಸುವುದು, ಶಾಶ್ವತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಕೊಯ್ಲು ನಂತರದ ಸಂಗ್ರಹಣೆಯನ್ನು ಸುಧಾರಿಸುವುದು, ನೀರಾವರಿ ವ್ಯವಸ್ಥೆಯನ್ನು ಉನ್ನತೀಕರಿಸುವುದು, ಮತ್ತು ದೀರ್ಘಕಾಲೀನ ಹಾಗೂ ಅಲ್ಪಾವಧಿ ಸಾಲಗಳ ಲಭ್ಯತೆಯನ್ನು ಸುಗಮಗೊಳಿಸುವುದು ಸೇರಿದಂತೆ ಹಲವು ಉದ್ದೇಶಗಳನ್ನು ಹೊಂದಿದೆ.
42,000 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳ ಉದ್ಘಾಟನೆ
ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 42,000 ಕೋಟಿ ರೂ.ಗೂ ಅಧಿಕ ಮೌಲ್ಯದ ಕೃಷಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ 24,000 ಕೋಟಿ ರೂ. ವೆಚ್ಚದ ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆ, 6 ವರ್ಷದ ದ್ವಿದಳ ಧಾನ್ಯ ಮಿಷನ್ ಯೋಜನೆ, 11,440 ಕೋಟಿ ರೂ. ವೆಚ್ಚದ 1,034 ಕೃಷಿ ಮೂಲಸೌಕರ್ಯ ಯೋಜನೆಗಳು, 3,597 ಕೋಟಿ ರೂ. ವೆಚ್ಚದ 16 ಪಶುಸಂಗೋಪನಾ ಕಾರ್ಯಕ್ರಮಗಳು, ಮತ್ತು 121 ಕೋಟಿ ರೂ. ವೆಚ್ಚದ 9 ಮೀನುಗಾರಿಕೆ ಸಂಬಂಧಿತ ಯೋಜನೆಗಳು ಸೇರಿವೆ.

ರೈತರಿಗೆ ಸನ್ಮಾನ
ದೆಹಲಿಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ವಿಶೇಷ ಸಾಧನೆ ಮಾಡಿದ ರೈತರನ್ನು ಪ್ರಧಾನಮಂತ್ರಿ ಸನ್ಮಾನಿಸಿದರು. ತುಮಕೂರು ಜಿಲ್ಲೆಯ ರೈತರಾದ ಶ್ರೀ ಪಂಚಾಕ್ಷರಪ್ಪ (ತಿಪಟೂರು) ಮತ್ತು ಶ್ರೀ ಪರಮೇಶ್ವರಯ್ಯ (ಚಿಕ್ಕನಾಯಕನಹಳ್ಳಿ) ಈ ಸನ್ಮಾನಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಸಚಿವ ವಿ. ಸೋಮಣ್ಣ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮಿಗಳು, ತಿಪಟೂರು ಕ್ಷೇತ್ರದ ಶಾಸಕ ಶ್ರೀ ಷಡಾಕ್ಷರಿ, ಶಿರಾ ಕ್ಷೇತ್ರದ ಶಾಸಕ ಶ್ರೀ ಟಿ.ಬಿ. ಜಯಚಂದ್ರ, ತುಮಕೂರು (ನಗರ) ಶಾಸಕ ಶ್ರೀ ಜ್ಯೋತಿ ಗಣೇಶ, ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀ ರವಿ ಹೆಬ್ಬಕ್ಕ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷರು, ಕೃಷಿ ಇಲಾಖೆಯ ಅಧಿಕಾರಿಗಳು, ಕೆವಿಕೆ ಅಧಿಕಾರಿಗಳು, ಮತ್ತು ರೈತರು ಭಾಗವಹಿಸಿದ್ದರು.

ರೈತರು ಈ ಯೋಜನೆಗಳ ಸಂಪೂರ್ಣ ಲಾಭವನ್ನು ಪಡೆದುಕೊಂಡು ಕೃಷಿ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಬೇಕೆಂದು ಸಚಿವ ವಿ. ಸೋಮಣ್ಣ ರೈತರಲ್ಲಿ ಮನವಿ ಮಾಡಿದರು.












