ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಕರ್ನಾಟಕ ಪ್ರತಿನಿಧಿಸಿದ ಡಾ. ಶಾಲಿನಿ ರಜನೀಶ್
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ಡಿಸೆಂಬರ್ 26ರಿಂದ 28ರವರೆಗೆ ನಡೆದ ಐದನೇ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಭಾಗವಹಿಸಿದ್ದು ವಿಶೇಷವಾಗಿದೆ.
ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿದ ಮೂರು ದಿನಗಳ ಈ ಸಮ್ಮೇಳನವು ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳ ಕುರಿತು ರಚನಾತ್ಮಕ ಸಂವಾದ ನಡೆಸುವ ಮೂಲಕ ಕೇಂದ್ರ-ರಾಜ್ಯ ಸಹಕಾರವನ್ನು ಬಲಪಡಿಸುವ ಉದ್ದೇಶ ಹೊಂದಿತ್ತು.
ಸಹಕಾರಿ ಒಕ್ಕೂಟದ ಪರಿಕಲ್ಪನೆಯಡಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಈ ವೇದಿಕೆಯು ದೇಶದ ಮಾನವ ಸಂಪನ್ಮೂಲಗಳನ್ನು ಬಲಪಡಿಸಿ, ಸುಸ್ಥಿರ ಅಭಿವೃದ್ಧಿಯತ್ತ ಏಕೀಕೃತ ಪ್ರಯತ್ನಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.
‘ವಿಕಸಿತ ಭಾರತಕ್ಕಾಗಿ ಮಾನವ ಬಂಡವಾಳ’ ಎಂಬ ಮುಖ್ಯ ವಿಷಯದಡಿ ನಡೆದ ಸಮ್ಮೇಳನದಲ್ಲಿ ಆರಂಭಿಕ ಬಾಲ್ಯ ಶಿಕ್ಷಣ, ಶಾಲಾ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉನ್ನತ ಶಿಕ್ಷಣ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಐದು ಪ್ರಮುಖ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಯಿತು.
ಇದಲ್ಲದೆ, ‘ಆಡಳಿತದಲ್ಲಿ ತಂತ್ರಜ್ಞಾನದ ಅವಕಾಶಗಳು, ಅಪಾಯಗಳು ಮತ್ತು ತಗ್ಗಿಸುವ ಕ್ರಮಗಳು’, ಸ್ಮಾರ್ಟ್ ಪೂರೈಕೆ ಸರಪಳಿ, ‘ಒಂದು ರಾಜ್ಯ – ಒಂದು ವಿಶ್ವದರ್ಜೆ ಪ್ರವಾಸಿ ತಾಣ’, ಆತ್ಮನಿರ್ಭರ ಭಾರತ ಮತ್ತು ಸ್ವದೇಶಿ ಚಿಂತನೆಗಳಂತಹ ಆರು ಮಹತ್ವದ ವಿಷಯಗಳ ಮೇಲೂ ಚರ್ಚೆ ನಡೆಯಿತು.
ಕರ್ನಾಟಕದ ಏಕೈಕ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಡಾ. ಶಾಲಿನಿ ರಜನೀಶ್ ಅವರ ಭಾಗವಹಿಸುವಿಕೆಯು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.












