ಯಶವಂತಪುರ: ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಪ್ರಕರಣವಾಗಿ ಪ್ರಕರಣ ದಾಖಲಿಸಲಾಗಿದೆ.
ಮೃತದೇಹವು ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿ ಬೆಂಕಿ ಹಚ್ಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರೋಪಿಗಳು ಕೃತ್ಯ ಎಸಗಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ದಿನದಿಂದ ಶವ ಇದ್ದರೂ ಪೊಲೀಸರ ಗಮನಕ್ಕೆ ಬರಲಿಲ್ಲ?
ಅತ್ಯಂತ ಜನಜಂಗುಳಿ ಇರುವ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯ ಶವ ಎರಡು ದಿನಗಳಿಂದ ಪತ್ತೆಯಾಗಿದ್ದರೂ, ಅದನ್ನು ಯಾರೂ ಗಮನಿಸದಿರುವುದು ಪ್ರಶ್ನೆಗೆ ಕಾರಣವಾಗಿದೆ. ಸ್ಥಳೀಯರು ಈ ಬಗ್ಗೆ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ, ಪೊಲೀಸರ ನಿರ್ಲಕ್ಷ್ಯ ಭಾರೀ ಟೀಕೆಗಳಿಗೆ ಕಾರಣವಾಗಿದೆ. ರೈಲ್ವೇ ಬೀಟ್ ಪೊಲೀಸ್ ಸಿಬ್ಬಂದಿಯ ಈ ರೀತಿಯ ಅಲಕ್ಷ್ಯತೆಯನ್ನು ಸಾರ್ವಜನಿಕರು ಕಿಡಿಕಾರಿದ್ದಾರೆ.
ರೈಲ್ವೇ ಎಸ್.ಪಿ ಸೌಮ್ಯಲತಾ ಪ್ರತಿಕ್ರಿಯೆ
ಈ ಕುರಿತು ರೈಲ್ವೇ ಎಸ್.ಪಿ ಸೌಮ್ಯಲತಾ ಮಾತನಾಡಿ, “ಬೆಳಿಗ್ಗೆ 9.30ರ ಸುಮಾರಿಗೆ ಈ ಬಗ್ಗೆ ನಮಗೆ ಮಾಹಿತಿ ಲಭ್ಯವಾಯಿತು. ಶವವು ನಿಲ್ದಾಣದ ಮೊದಲನೇ ಪ್ಲಾಟ್ಫಾರ್ಮ್ನ ಅಂಚಿನಲ್ಲಿ ಪತ್ತೆಯಾಗಿದ್ದು, ಅದು ಎರಡು ದಿನಗಳ ಹಿಂದಿನದಾಗಿರಬಹುದು. ಇಲ್ಲಿ ಕೊಲೆ ಮಾಡಿ ಶವ ಸುಟ್ಟಿರುವ ಶಂಕೆ ಇದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ಶೀಘ್ರದಲ್ಲೇ ಅಪರಾಧಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ.