ಬೆಂಗಳೂರು: ಮತಗಳ್ಳತನ ವಿರುದ್ಧ ರಾಜ್ಯದಲ್ಲಿ ‘ಕ್ವಿಟ್ ವೋಟ್ ಚೋರಿ’ ಚಳುವಳಿ ಆರಂಭಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಮತದಾನದ ಹಕ್ಕು ಬದುಕಿನ ಹಕ್ಕು ಎಂದು ವಿವರಿಸಿದ ಅವರು, ರಾಜ್ಯದಲ್ಲಿ ಸುಮಾರು ೧ ಕೋಟಿ ಮತದಾರರನ್ನು ಡಿಲೀಟ್ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಭಾನುವಾರ ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಶಿವಕುಮಾರ್, “ನೀವು ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಮತಗಳ್ಳತನ ವಿರುದ್ಧ ಹೋರಾಟ ಮಾಡಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ಎಸ್ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಕತ್ತರಿಸುವುದನ್ನು ತಡೆಯಬೇಕು,” ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಮತದಾನ ಹಕ್ಕು ಉಳಿಸಿಕೊಳ್ಳಿ, ಗ್ಯಾರಂಟಿ ಯೋಜನೆಗಳಿಗೆ ಅರ್ಹರಾಗಿ
ರಾಜ್ಯದಲ್ಲಿ ೧ ಕೋಟಿ ಮತದಾರರನ್ನು ಡಿಲೀಟ್ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ ಅವರು, “ಮತದಾನದ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ ಯೋಜನೆಗಳು ಲಭ್ಯವಾಗುವುದು ಕಷ್ಟ. ಬಿಹಾರದಲ್ಲಿ ಮತದಾನ ಹಕ್ಕು ಇರುವವರಿಗೆ ಮಾತ್ರ ಸರ್ಕಾರಿ ಯೋಜನೆಗಳು ದೊರೆಯುತ್ತಿವೆ. ಆದ್ದರಿಂದ ಎಲ್ಲರೂ ಗಣತಿ ನಮೂನೆ ತುಂಬಿ ಹಿಂತಿರುಗಿಸಿ. ೧೮ ವರ್ಷ ತುಂಬಿದ ಯುವಕರು ಫಾರಂ-೬ ಮೂಲಕ ಮತದಾರರಾಗಿ,” ಎಂದು ಕರೆ ನೀಡಿದರು.
ರಾಜೀವ್ ಗಾಂಧಿ ಅವರು ಮತದಾನದ ವಯಸ್ಸನ್ನು ೧೮ಕ್ಕೆ ಇಳಿಸಿದಾಗ ವಿರೋಧ ಪಕ್ಷಗಳು ವಿರೋಧಿಸಿದ್ದನ್ನು ನೆನಪಿಸಿದ ಶಿವಕುಮಾರ್, “ರಾಜೀವ್ ಗಾಂಧಿ ೧೦ನೇ ತರಗತಿ ಪಾಸ್ ವಿದ್ಯಾರ್ಥಿಗೆ ದೇಶ ಕಾಯುವ ಜವಾಬ್ದಾರಿ ನೀಡುತ್ತಿದ್ದಾರೆ ಎಂದು ಹೇಳಿದ್ದರು,” ಎಂದರು.

ಕಾಂಗ್ರೆಸ್ ಎಂದಿಗೂ ಜಗ್ಗಲ್ಲ, ಬಗ್ಗಲ್ಲ
“ಕಾಂಗ್ರೆಸ್ ಪಕ್ಷ ಎಂದಿಗೂ ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ. ದೇಶದಿಂದ ಕಾಂಗ್ರೆಸ್ ಅನ್ನು ಹೊರಗೆ ಹಾಕುವ ದೊಡ್ಡ ಷಡ್ಯಂತ್ರ ನಡೆಯಿತು. ಆದರೂ ಇಂಡಿಯಾ ಒಕ್ಕೂಟ ೨೫ ಸೀಟುಗಳ ಅಂತರದಲ್ಲಿ ಸೋತಿತು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ,” ಎಂದು ಹೇಳಿದ ಅವರು, ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ೧೩೬ ಸೀಟುಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವುದನ್ನು ನೆನಪಿಸಿದರು.
೧೦೦ ಕಾಂಗ್ರೆಸ್ ಕಚೇರಿಗಳ ನಿರ್ಮಾಣ, ಹಿರಿಯ ನಾಯಕರ ಸನ್ಮಾನ
ಮಹಾತ್ಮಾ ಗಾಂಧಿ ಅವರು ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಶತಮಾನೋತ್ಸವದ ನೆನಪಿನಲ್ಲಿ ೧೦೦ ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು. ಪ್ರತಿ ತಾಲ್ಲೂಕಿನಲ್ಲಿ ಜಾಗ ಪಡೆಯಲಾಗಿದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ ೭೦ ವರ್ಷ ಮೇಲ್ಪಟ್ಟ ನೂರು ಹಿರಿಯ ನಾಯಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.

ಭಾರತ ಜೋಡೋ ಯುವ ಶಕ್ತಿ ಸಂಘ: ೧೦ ಸಾವಿರ ಘಟಕಗಳ ಗುರಿ
ಪ್ರತಿ ಗ್ರಾಮ ಪಂಚಾಯತಿ ಮತ್ತು ವಾರ್ಡ್ಗಳಲ್ಲಿ ಯುವಕರ ಸಂಘಗಳನ್ನು ಸ್ಥಾಪಿಸಿ ರಾಜ್ಯಾದ್ಯಂತ ೧೦ ಸಾವಿರ ‘ಭಾರತ ಜೋಡೋ ಯುವ ಶಕ್ತಿ ಸಂಘ’ಗಳನ್ನು ರಚಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಶಿವಕುಮಾರ್ ಪ್ರಕಟಿಸಿದರು. ಈ ತಿಂಗಳು ನೋಂದಣಿ ಆರಂಭವಾಗಲಿದೆ. ಯುವಜನ ಹಾಗೂ ಕ್ರೀಡಾ ಇಲಾಖೆ ನೇತೃತ್ವದಲ್ಲಿ ಈ ಸಂಘಗಳು ಕಾರ್ಯನಿರ್ವಹಿಸುತ್ತವೆ. ಪ್ರತಿ ಸಂಘಕ್ಕೆ ೧೫೦-೨೦೦ ಸದಸ್ಯರು, ೧೬-೪೦ ವಯೋಮಿತಿ, ೧೦ ರೂಪಾಯಿ ಗೌರವ ಧನದೊಂದಿಗೆ ಸದಸ್ಯತ್ವ ಪಡೆಯಬಹುದು.
ಈ ಯೋಜನೆಗೆ ೧,೦೦೦ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುವುದು. ಯುವಕರಲ್ಲಿ ನಾಯಕತ್ವ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬೆಳೆಸಲು ಉತ್ತೇಜನ ನೀಡಲಾಗುವುದು ಎಂದರು.
ಯುವಕರಿಗೆ ೭೨ ಸಾವಿರ ಹುದ್ದೆಗಳ ಭರ್ತಿ
ರಾಜ್ಯದಲ್ಲಿ ೭೨ ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದೇವೆ ಎಂದು ಸಿಎಂ ಹೇಳಿದರು. “ಯುವಕರಿಗೆ ಉದ್ಯೋಗ, ಪಾರದರ್ಶಕ ನೇಮಕಾತಿ ನೀಡುತ್ತೇವೆ. ಯುವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡುವುದು ನಮ್ಮ ಗುರಿ,” ಎಂದರು.
ಕ್ವಿಟ್ ಇಂಡಿಯಾ ಚಳುವಳಿಯ ಐತಿಹಾಸಿಕ ಪ್ರಾಮುಖ್ಯತೆಯನ್ನು ಸ್ಮರಿಸಿದ ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ ಕಾರ್ಯಕರ್ತರನ್ನು ಗೌರವಿಸುವುದು ಮುಖ್ಯ ಎಂದು ತಿಳಿಸಿದರು.











