ಕರ್ನಾಟಕದ ಐತಿಹಾಸಿಕ ಸ್ಮಾರಕಗಳು, ಪುರಾತತ್ವ ತಾಣಗಳು, ವಸ್ತುಸಂಗ್ರಹಾಲಯಗಳು ಹಾಗೂ ಸಾಂಸ್ಕೃತಿಕ ಸಂಪತ್ತನ್ನು ವ್ಯವಸ್ಥಿತವಾಗಿ ಸಂರಕ್ಷಿಸುವುದರ ಜೊತೆಗೆ ರಾಜ್ಯದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ‘ಕರ್ನಾಟಕ ಹೆರಿಟೇಜ್ ಅಂಡ್ ಕಲ್ಚರಲ್ ಫೌಂಡೇಶನ್ (KHCF)’ ಸ್ಥಾಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ.
ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಸಚಿವ ಸಂಪುಟದ ಮುಂದೆ ಸಲ್ಲಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಜಾರಿಯಲ್ಲಿರುವ ‘ಅಡಾಪ್ಟ್ ಎ ಮಾನ್ಯುಮೆಂಟ್’ ಯೋಜನೆಗೆ ದೊರೆತಿರುವ ಉತ್ತಮ ಸ್ಪಂದನೆಯನ್ನು ಮತ್ತಷ್ಟು ವಿಸ್ತರಿಸಿ, ಸ್ಮಾರಕಗಳ ಸಂರಕ್ಷಣೆ, ಪುನಶ್ಚೇತನ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಖಾಸಗಿ ವಲಯ ಹಾಗೂ ಸಾರ್ವಜನಿಕರ ಸಹಭಾಗಿತ್ವವನ್ನು ಬಳಸಿಕೊಳ್ಳುವುದು ಫೌಂಡೇಶನ್ನ ಪ್ರಮುಖ ಉದ್ದೇಶವಾಗಿದೆ.
ರಾಜ್ಯದ 239 ತಾಲ್ಲೂಕುಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸುಮಾರು ಒಂದು ಲಕ್ಷ ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ತಾಣಗಳು ಗುರುತಿಸಲ್ಪಟ್ಟಿವೆ. ಇಂತಹ ವಿಶಾಲ ಸಂಪತ್ತಿನ ಸಂರಕ್ಷಣೆಗೆ ದೀರ್ಘಕಾಲಿಕ ಮತ್ತು ಸ್ಥಿರವಾದ ಹಣಕಾಸು ವ್ಯವಸ್ಥೆಯ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಸ್ತಾವಿತ ಫೌಂಡೇಶನ್ ಮೂಲಕ ಸಿಎಸ್ಆರ್ ಅನುದಾನ, ಅನಿವಾಸಿ ಭಾರತೀಯರ (ಎನ್ಆರ್ಐ) ಕೊಡುಗೆ ಹಾಗೂ ಸಾರ್ವಜನಿಕರ ದೇಣಿಗೆಗಳನ್ನು ಪಾರದರ್ಶಕ ವ್ಯವಸ್ಥೆಯಡಿ ಒಗ್ಗೂಡಿಸಲಾಗುವುದು. ದಾನಿಗಳು ತಮಗೆ ಆಸಕ್ತಿಯಿರುವ ನಿರ್ದಿಷ್ಟ ಸ್ಮಾರಕ, ಪುರಾತತ್ವ ತಾಣ ಅಥವಾ ವಸ್ತುಸಂಗ್ರಹಾಲಯದ ಸಂರಕ್ಷಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ನೇರವಾಗಿ ಕೊಡುಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಫೌಂಡೇಶನ್ ಕೇವಲ ಸ್ಮಾರಕಗಳ ಸಂರಕ್ಷಣೆಗೆ ಸೀಮಿತವಾಗದೆ, ಆಯಾ ಸ್ಮಾರಕಗಳ ಕಲೆ, ಸಾಹಿತ್ಯ, ವಾಸ್ತುಶಿಲ್ಪ, ಜನಪದ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದೇಶ-ವಿದೇಶಗಳಲ್ಲಿ ಪರಿಚಯಿಸುವ ವೇದಿಕೆಯಾಗುವ ಉದ್ದೇಶ ಹೊಂದಿದೆ. ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕ ರಾಯಭಾರಿಗಳಾಗಿ ತೊಡಗಿಸಿಕೊಳ್ಳುವುದರ ಜೊತೆಗೆ, ಯುವಜನರು ತಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಸ್ಮಾರಕಗಳು ಹಾಗೂ ಸ್ಥಳೀಯ ಪರಂಪರೆಯೊಂದಿಗೆ ನೇರವಾಗಿ ಸಂಪರ್ಕ ಹೊಂದುವಂತಹ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗುವುದು.
ಹಣಕಾಸು ನಿರ್ವಹಣೆ, ಲೆಕ್ಕಪತ್ರ, ಆಡಿಟ್ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಖಚಿತಪಡಿಸುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
“ಕರ್ನಾಟಕದ ಸ್ಮಾರಕಗಳು ಕೇವಲ ಕಲ್ಲು ಮತ್ತು ಕಟ್ಟಡಗಳಲ್ಲ; ಅವು ನಮ್ಮ ಇತಿಹಾಸ, ಕಲೆ ಮತ್ತು ಗುರುತಿನ ಜೀವಂತ ಸಾಕ್ಷಿಗಳಾಗಿವೆ. ಅವುಗಳನ್ನು ಸಂರಕ್ಷಿಸುವುದರ ಜೊತೆಗೆ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸಬೇಕಿದೆ. ಸರ್ಕಾರದ ಪ್ರಯತ್ನಗಳಿಗೆ ಸಿಎಸ್ಆರ್ ಸಂಸ್ಥೆಗಳು, ಅನಿವಾಸಿ ಭಾರತೀಯರು, ಜಾಗತಿಕ ಕನ್ನಡಿಗರು ಮತ್ತು ಸಾರ್ವಜನಿಕರ ಸಹಭಾಗಿತ್ವವನ್ನು ಜೋಡಿಸುವ ಹೊಸ ಮಾದರಿಯಾಗಿ ಕರ್ನಾಟಕ ಹೆರಿಟೇಜ್ ಅಂಡ್ ಕಲ್ಚರಲ್ ಫೌಂಡೇಶನ್ ಅನ್ನು ರೂಪಿಸುವ ಉದ್ದೇಶ ಹೊಂದಿದ್ದೇವೆ. ಮುಂದಿನ ಪೀಳಿಗೆ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವಂತಾಗಬೇಕು,” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾದ್ ಮನೋಹರ್ ಅವರು, “ರಾಜ್ಯದಾದ್ಯಂತ ಹರಡಿರುವ ಐತಿಹಾಸಿಕ ಸ್ಮಾರಕಗಳ ಪ್ರಮಾಣ ಮತ್ತು ವೈವಿಧ್ಯತೆಯನ್ನು ಗಮನಿಸಿದರೆ, ಸಂರಕ್ಷಣೆಗೆ ಸರ್ಕಾರ ಮತ್ತು ಸಮಾಜದ ಜಂಟಿ ಜವಾಬ್ದಾರಿಯ ಅಡಿಯಲ್ಲಿ ದೀರ್ಘಕಾಲಿಕ ಸಂಪನ್ಮೂಲಗಳನ್ನು ರೂಪಿಸುವ ಅಗತ್ಯವಿದೆ. ಖೆಚ್ಎಫ್ ಮೂಲಕ ದಾನಿಗಳು ತಮಗೆ ಆಸಕ್ತಿಯಿರುವ ತಾಣಗಳೊಂದಿಗೆ ನೇರವಾಗಿ ಸಂಪರ್ಕ ಹೊಂದುವಂತೆ ಮಾಡುವುದರ ಜೊತೆಗೆ, ಹಣಕಾಸು ನಿರ್ವಹಣೆ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಸ್ಪಷ್ಟವಾದ ಪಾರದರ್ಶಕ ವ್ಯವಸ್ಥೆ ರೂಪಿಸಲಾಗುವುದು,” ಎಂದು ಹೇಳಿದ್ದಾರೆ.











