ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಸರಿಯಿಲ್ಲವೆಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಧರ್ಮಸ್ಥಳ ವಿಷಯದಲ್ಲಿ ಷಡ್ಯಂತ್ರ ಮತ್ತು ಪಿತೂರಿ ನಡೆಸಿದವರಿಗೆ ಶ್ರೀ ಮಂಜುನಾಥ ಸ್ವಾಮಿಯೇ ತಕ್ಕ ಶಾಸ್ತಿ ಮಾಡುವನು,” ಎಂದು ಅವರು ಗುಡುಗಿದರು.
ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚನೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದರು. “ಕೆಲವು ಶಕ್ತಿಗಳ ಒತ್ತಡಕ್ಕೆ ಮಣಿದು ಎಸ್ಐಟಿ ರಚನೆ ಮಾಡಲಾಗಿದೆ. ಸರ್ಕಾರದ ಈ ನಡವಳಿಕೆ ಕ್ಷೇತ್ರಕ್ಕೆ ಅಪಮಾನ ಉಂಟುಮಾಡಿದೆ. ಇದು ಅಕ್ಷಮ್ಯ,” ಎಂದು ಆರೋಪಿಸಿದರು.
ತನಿಖೆಯ ನಾಟಕ ಮತ್ತು ಷಡ್ಯಂತ್ರ
“ಆರಂಭದಿಂದಲೂ ತನಿಖೆಯ ನಾಟಕ ನಡೆಯುತ್ತಿದೆ. ಸಿ.ಎಸ್. ದ್ವಾರಕಾನಾಥ್ ಎಂಬ ವ್ಯಕ್ತಿ ದೂರು ನೀಡಿದ ತಕ್ಷಣ ಮುಖ್ಯಮಂತ್ರಿಗಳು ತುರ್ತಾಗಿ ಎಸ್ಐಟಿ ರಚನೆಗೆ ಆದೇಶಿಸಿದ್ದಾರೆ. ಇದರ ಹಿಂದೆ ಎಡಪಂಥೀಯ ಶಕ್ತಿಗಳ ಜೊತೆಗೆ ಕಾಣದ ಕುತಂತ್ರ ಇದೆ,” ಎಂದು ಕುಮಾರಸ್ವಾಮಿ ಆಪಾದಿಸಿದರು. “ಧರ್ಮಸ್ಥಳದ ವಿಚಾರದಲ್ಲಿ ಸರ್ಕಾರದ ವರ್ತನೆ ಸರಿಯಿಲ್ಲ. ಮುಂದಿನ ದಿನಗಳಲ್ಲಿ ಶ್ರೀ ಮಂಜುನಾಥ ಸ್ವಾಮಿ ಇದಕ್ಕೆ ಶಿಕ್ಷೆ ನೀಡುವುದು ಖಚಿತ,” ಎಂದು ಅವರು ಹೇಳಿದರು.
ಚಾಮುಂಡಿ ಬೆಟ್ಟ ವಿವಾದ: ಹಿಂದೂ ಕ್ಷೇತ್ರಕ್ಕೆ ಅಪಚಾರ ಬೇಡ
ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ವಿಚಾರಕ್ಕೆ ತಕರಾರಿಲ್ಲವೆಂದ ಕುಮಾರಸ್ವಾಮಿ, ಕೆಲವರ ಉದ್ಧಟತನದ ಹೇಳಿಕೆಗಳನ್ನು ಖಂಡಿಸಿದರು. “ತಾಯಿಯ ಮೆರವಣಿಗೆ ಜವಾಬ್ದಾರಿಯನ್ನು ಬಾನು ಮುಷ್ತಾಕ್ ಅವರಿಗೆ ಕೊಟ್ಟಿದ್ದಾರೆ, ಇದಕ್ಕೆ ನನ್ನ ವಿರೋಧವಿಲ್ಲ. ಆದರೆ, ಚಾಮುಂಡೇಶ್ವರಿ ದೇಗುಲ ಹಿಂದೂಗಳ ಕ್ಷೇತ್ರವಲ್ಲ ಎಂದು ಕೆಲವರು ಉದ್ಧಟತನದಿಂದ ಹೇಳುತ್ತಿದ್ದಾರೆ. ಇಂತಹ ಅಪಚಾರ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಸರಿಯಲ್ಲ. ಇದು ಕಾಂಗ್ರೆಸ್ ಸರ್ಕಾರಕ್ಕೆ ಆಪತ್ತು ತರಬಹುದು,” ಎಂದು ಎಚ್ಚರಿಕೆ ನೀಡಿದರು.
ಡಿ.ಕೆ. ಶಿವಕುಮಾರ್ಗೆ ತಿರುಗೇಟು
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್ಎಸ್ಎಸ್ ಗೀತೆ ಹಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, “ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ. ಆದರೆ, ಸದನದಲ್ಲಿ ಆರ್ಎಸ್ಎಸ್ ಗೀತೆ ಹಾಡಿದ್ದಾರೆ. ತಮಾಷೆಗೂ ಇಂತಹ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳಲ್ಲ. ಈಗ ಅವರಿಗೆ ಕ್ಷಮೆ ಕೇಳುವ ಸ್ಥಿತಿ ಬಂದಿದೆ,” ಎಂದು ಕುಮಾರಸ್ವಾಮಿ ಕುಟುಕಿದರು.
ಮಳೆ, ನೆರೆಯಿಂದ ಜನರ ಕಷ್ಟ: ಸರ್ಕಾರದ ನಿರ್ಲಕ್ಷ್ಯ
“ರಾಜ್ಯದಲ್ಲಿ ವಿಪರೀತ ಮಳೆಯಿಂದ ನೆರೆ ಮತ್ತು ಬೆಳೆ ಹಾನಿಯಿಂದ ಜನರು ತತ್ತರಿಸಿದ್ದಾರೆ. ಸರ್ಕಾರ ಜನರ ನೆರವಿಗೆ ಧಾವಿಸುವ ಬದಲು ಇಂತಹ ವಿಷಯಗಳಲ್ಲಿ ಕಾಲಹರಣ ಮಾಡುತ್ತಿದೆ. ಇದು ನೋವಿನ ಸಂಗತಿ,” ಎಂದು ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.