ಬೆಂಗಳೂರು: ಬೆಂಗಳೂರು-ಮೈಸೂರು ರೈಲು ಮಾರ್ಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಒಟ್ಟಿಗೆ ವಿಂಡೋ ಟ್ರೈಲಿಂಗ್ ಪರಿವೀಕ್ಷಣೆ ನಡೆಸಿದರು. ಐದು ಗಂಟೆಗಳ ಕಾಲ ವಿಶೇಷ ರೈಲಿನಲ್ಲಿ ಪ್ರಯಾಣಿಸುವಾಗ ಮಾರ್ಗದ ಉದ್ದಕ್ಕೂ ಜನರ ಬೇಡಿಕೆಗಳನ್ನು ಆಲಿಸಿದ ಸಚಿವರ್ದ್ವಯರು, ಮಂಡ್ಯ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಹೊರಟ ವಿಶೇಷ ರೈಲು ಅಪರಾಹ್ನ 3 ಗಂಟೆಗೆ ಮೈಸೂರು ತಲುಪಿತು. ಪ್ರಯಾಣದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, “ನಾನು ಹಿಂದೆ ಹೆಚ್ಚು ರೈಲಿನಲ್ಲೇ ಪ್ರವಾಸ ಮಾಡುತ್ತಿದ್ದೆ. ಕೆಲ ವರ್ಷಗಳ ನಂತರ ಮತ್ತೆ ರೈಲಿನಲ್ಲಿ ಪ್ರಯಾಣಿಸಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ” ಎಂದು ಹೇಳಿದರು.
ಸಚಿವರುಗಳು ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ರೈಲು ನಿಲ್ದಾಣಗಳ ಅಭಿವೃದ್ಧಿ, ಹೆಚ್ಚುವರಿ ರೈಲುಗಳ ಸಂಚಾರ, ಪ್ರಮುಖ ರೈಲುಗಳ ನಿಲುಗಡೆ, ಲೆವೆಲ್ ಕ್ರಾಸಿಂಗ್ಗಳಲ್ಲಿ ಅಂಡರ್ ಪಾಸ್ ಮತ್ತು ಮೇಲು ಸೇತುವೆಗಳ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.
ಪ್ರಮುಖ ನಿರ್ಧಾರಗಳು:
- ಮಂಡ್ಯ ರೈಲು ನಿಲ್ದಾಣ ಅಭಿವೃದ್ಧಿ: ಮಂಡ್ಯ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಹೆಚ್ಚು ಫ್ಲಾಟ್ಫಾರ್ಮ್ಗಳು, ಆಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರಿಗೆ ಸುಗಮ ಸಂಚಾರ ಒದಗಿಸಲು ಕ್ರಮ ವಹಿಸಲಾಗುವುದು.
- ಮದ್ದೂರಿನಲ್ಲಿ ಹೊಸ ರೈಲು ನಿಲ್ದಾಣ: ಪಟ್ಟಣದಲ್ಲಿ ಪ್ರಸ್ತುತ ನಿಲ್ದಾಣ ಸಾಕಾಗುತ್ತಿಲ್ಲ ಎಂಬುದನ್ನು ಮನವರಿಕೆ ಮಾಡಿದ ಕುಮಾರಸ್ವಾಮಿ ಅವರಿಗೆ ಸ್ಪಂದಿಸಿದ ಸೋಮಣ್ಣ ಅವರು, ಜಾಗ ಗುರುತಿಸಿದರೆ ತಕ್ಷಣ ಸಮೀಕ್ಷೆ ನಡೆಸಿ ಹೊಸ ನಿಲ್ದಾಣ ನಿರ್ಮಿಸುವುದಾಗಿ ಭರವಸೆ ನೀಡಿದರು. ಹಾಲಿ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ ಆಧುನಿಕರಣ ಮಾಡಲಾಗುವುದು.
- ಒಡೆಯರ್ ಎಕ್ಸ್ಪ್ರೆಸ್ ನಿಲುಗಡೆ: ರಾಮನಗರದಲ್ಲಿ ಒಡೆಯರ್ ಎಕ್ಸ್ಪ್ರೆಸ್ ರೈಲಿನ ನಿಲುಗಡೆಗೆ ಅನುಮತಿ ಸಿಕ್ಕಿದೆ. ಶೀಘ್ರದಲ್ಲೇ ಚಾಲನೆ ನೀಡಲಾಗುವುದು.
- ಲೆವೆಲ್ ಕ್ರಾಸಿಂಗ್ ಸಮಸ್ಯೆ: ನಿಡಘಟ್ಟ, ಹನಕೆರೆ ಸೇರಿದಂತೆ ಹಲವು ಕಡೆ ಲೆವೆಲ್ ಕ್ರಾಸಿಂಗ್ಗಳಲ್ಲಿ ಅಂಡರ್ ಪಾಸ್ ಅಥವಾ ಮೇಲು ಸೇತುವೆ ನಿರ್ಮಿಸುವುದಕ್ಕೆ ತುರ್ತು ಸಮೀಕ್ಷೆ ನಡೆಸಲಾಗುವುದು. ರೈತರು, ಶಾಲಾ ಮಕ್ಕಳು ಮತ್ತು ಕೃಷಿ ವಾಹನಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
- ಇತರ ಬೇಡಿಕೆಗಳು: ಹೆಚ್ಚು ಡೆಮೋ ರೈಲುಗಳ ಸಂಚಾರ, ಪ್ರಮುಖ ರೈಲುಗಳ ನಿಲುಗಡೆ, ಕೆರೆಗಳು-ಕುಂಟೆಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ 15 ದಿನಗಳಲ್ಲಿ ಎಲ್ಲಾ ಮನವಿಗಳನ್ನು ಪರಿಶೀಲಿಸಿ ಕ್ರಮ ವಹಿಸುವುದಾಗಿ ಸೋಮಣ್ಣ ಅವರು ಭರವಸೆ ನೀಡಿದರು.

ಪ್ರಯಾಣದ ವೇಳೆ ನಿಡಘಟ್ಟ, ಹನಕೆರೆ, ಯಲಿಯೂರು, ಪಾಂಡವಪುರ, ಶ್ರೀರಂಗಪಟ್ಟಣ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಮಂಡ್ಯ ಜಿಲ್ಲೆಯ ಕೃಷಿ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ರೈಲು ಸಾರಿಗೆಯು ಮುಖ್ಯವಾಗಿದೆ ಎಂದು ಒತ್ತಿ ಹೇಳಿದ ಕುಮಾರಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರೈಲ್ವೆ ವಲಯದಲ್ಲಿ ಪರಿವರ್ತನೆಯಾಗುತ್ತಿದೆ ಎಂದು ಹೇಳಿದರು.
ಈ ಪರಿವೀಕ್ಷಣೆಯಲ್ಲಿ ನೈರುತ್ಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ಮಾಜಿ ಸಚಿವರು ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್ ಮತ್ತು ಮೈಸೂರು-ಕೊಡಗು ಸಂಸದ ಚಾಮರಾಜ ಕೃಷ್ಣರಾಜ ಒಡೆಯರ್ ಅವರು ಉಪಸ್ಥಿತರಿದ್ದರು.












