ಬೆಂಗಳೂರು: ಸೋಲಿನ ಭಯದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಯನ್ನು ಪದೇ ಪದೇ ಮುಂದೂಡುತ್ತಿರುವುದು ಬೆಂಗಳೂರು ಜನತೆಗೆ ಮಾಡಿದ ದ್ರೋಹ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ 198 ವಾರ್ಡುಗಳ ಆಧಾರದಲ್ಲಿ ಚುನಾವಣೆ ನಡೆಸಿದ್ದರೆ ಈಗಾಗಲೇ ಮುಗಿದಿರುತ್ತಿತ್ತು ಎಂದು ಹೇಳಿದರು. ಆದರೆ ಬೆಂಗಳೂರನ್ನು ಐದು ಭಾಗಗಳಾಗಿ ವಿಭಜಿಸಿದ ಬಳಿಕ ಕಾಂಗ್ರೆಸ್ನ ಆಂತರಿಕ ಸಮೀಕ್ಷೆಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸೋಲು ಖಚಿತವಾಗಿದೆ ಎಂಬ ವರದಿ ಬಂದಿರುವುದರಿಂದ ಉದ್ದೇಶಪೂರ್ವಕವಾಗಿ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದು ಆರೋಪಿಸಿದರು.
“ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಅಧಿಕಾರ ಹಸ್ತಾಂತರವಾಗುವ ಮುನ್ನ ಚುನಾವಣೆ ನಡೆಯಬಾರದು ಎಂಬ ಬಯಕೆಯಿದೆ. ಇದು ಕಾಂಗ್ರೆಸ್ ಒಳಜಗಳದ ಪರಿಣಾಮವಾಗಿ ಬೀದಿ ಬೀದಿಗಳಲ್ಲಿ ಕಸದ ರಾಶಿ ಸಂಗ್ರಹವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ,” ಎಂದು ಅಶೋಕ ಟೀಕಿಸಿದರು.
ಕೋರ್ಟ್ ನೀಡಿರುವ ಕೊನೆಯ ಗಡುವಿನೊಳಗೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ಬಿಜೆಪಿ ಚುನಾವಣೆಗೆ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದರು.
ಎಸ್ಐಆರ್, ಸಮೀಕ್ಷೆ ನೆಪ ಮಾತ್ರ
ಎಸ್ಐಆರ್ ಹಾಗೂ ಸರ್ವೇ ನೆಪ ಹೇಳಿ ಚುನಾವಣೆ ಮುಂದೂಡುವುದು ಕೇವಲ ರಾಜಕೀಯ ತಂತ್ರ ಎಂದು ಅಶೋಕ ಅಭಿಪ್ರಾಯಪಟ್ಟರು. ಹಾಲು, ವಿದ್ಯುತ್, ಮನೆ ತೆರಿಗೆ, ಆಲ್ಕೋಹಾಲ್ ತೆರಿಗೆ ಹೆಚ್ಚಳ, ಹೊಸ ಖಾತಾ ವ್ಯವಸ್ಥೆಯಂತಹ ಜನ ವಿರೋಧಿ ನಿರ್ಧಾರಗಳಿಂದ ಬೆಂಗಳೂರು ಜನರು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಕಾರಣಕ್ಕಾಗಿಯೇ ಚುನಾವಣೆಯನ್ನು ಮುಂದೂಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಬಿಡದಿ ರೈತರಿಗೆ ದ್ರೋಹ
ಬಿಡದಿಯಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಸ್ವಾಧೀನಪಡಿಸುವ ಸರ್ಕಾರದ ನಡೆ ರೈತರಿಗೆ ಮಾಡುತ್ತಿರುವ ದ್ರೋಹ ಎಂದು ಅಶೋಕ ಖಂಡಿಸಿದರು. ತೆಂಗು, ಮಾವು, ರೇಷ್ಮೆ ಮತ್ತು ಹಾಲು ಉತ್ಪಾದನೆಗೆ ಪ್ರಸಿದ್ಧವಾದ ಈ ಪ್ರದೇಶದಲ್ಲಿ ನಕಲಿ ರೈತರನ್ನು ಬಳಸಿ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಆರೋಪಿಸಿದರು.
“ನಿಜವಾದ ರೈತರು ಜಮೀನು ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬೆಂಗಳೂರು ಸುತ್ತಮುತ್ತಲೂ ಲಕ್ಷಾಂತರ ಖಾಲಿ ಜಾಗಗಳು ಮತ್ತು ಫ್ಲ್ಯಾಟ್ಗಳಿರುವಾಗ ರೈತರ ಜಮೀನು ಕಬಳಿಸುವ ಅಗತ್ಯವೇನು?” ಎಂದು ಪ್ರಶ್ನಿಸಿದರು.
ಸರ್ಕಾರ ಆರ್ಥಿಕ ದಿವಾಳಿಯಾಗಿರುವುದರಿಂದ ಹೊಸ ಟೆಂಡರ್ಗಳ ಮೂಲಕ ಕಮಿಷನ್ ಪಡೆಯುವ ಉದ್ದೇಶದಿಂದಲೇ ಈ ಭೂ ಸ್ವಾಧೀನ ನಡೆಯುತ್ತಿದೆ ಎಂದು ಆರ್. ಅಶೋಕ ಆರೋಪಿಸಿದರು.
‘ಬೆಂಗಳೂರು’ ಹೆಸರಿನ ರಾಜಕೀಯ
ಕನಕಪುರ ಬೆಂಗಳೂರು ಎಂದು ಹೇಳಿದ ಬಳಿಕ ಇತರ ಜಿಲ್ಲೆಗಳಿಗೂ ‘ಬೆಂಗಳೂರು’ ಹೆಸರು ಸೇರಿಸುವ ಸ್ಪರ್ಧೆ ಶುರುವಾಗಿದೆ ಎಂದು ವ್ಯಂಗ್ಯವಾಡಿದ ಅಶೋಕ, ಕರಾವಳಿ ಬೆಂಗಳೂರು, ಉತ್ತರ ಕರ್ನಾಟಕ ಬೆಂಗಳೂರು ಎಂಬ ಹೆಸರುಗಳು ಅಭಿವೃದ್ಧಿ ತರುವುದಿಲ್ಲ ಎಂದರು. ತುಮಕೂರಿಗೆ ಬೆಂಗಳೂರು ಹೆಸರು ನೀಡುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮೂಲ ಹೆಸರುಗಳನ್ನು ಮರುಸ್ಥಾಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಹೊಸ ಖಾತಾ ವ್ಯವಸ್ಥೆಯೂ ಜನರನ್ನು ಕಂಗಾಲು ಮಾಡುತ್ತಿದೆ ಎಂದು ಹೇಳಿದ ಅಶೋಕ, ಇಷ್ಟೆಲ್ಲ ಜನ ವಿರೋಧಿ ಕ್ರಮಗಳ ನಡುವೆಯೂ ಕಾಂಗ್ರೆಸ್ ಚುನಾವಣೆ ಎದುರಿಸಲು ಹೆದರುತ್ತಿದೆ ಎಂದು ತಿಳಿಸಿದರು.











