ಬೆಂಗಳೂರು: “ರಾಜ್ಯ ಸರ್ಕಾರ ಉರ್ದು ಭಾಷೆಗೆ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಮಾಡುತ್ತಿರುವ ಅಪಪ್ರಚಾರವು ಸಂಪೂರ್ಣ ಸುಳ್ಳಾಗಿದ್ದು, ಇದರ ಹಿಂದೆ ಕೋಮುವೈಷಮ್ಯ ಹುಟ್ಟಿಸುವ ದುರುದ್ದೇಶ ಸ್ಪಷ್ಟವಾಗುತ್ತದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅವರು, “ಒಂದು ರಾಷ್ಟ್ರೀಯ ಪಕ್ಷ ಎಡವಟ್ಟಾದ ಮಾಹಿತಿಯನ್ನು ಕಿಡಿಗೇಡಿ ಟ್ರೋಲರ್ಗಳಂತೆ ಪಸರಿಸುವುದು ವಿಷಾದನೀಯ. ಕನ್ನಡ ಭಾಷೆಯ ಅಭಿವೃದ್ದಿಗಾಗಿ 2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರ ₹38,688 ಕೋಟಿ ಅನುದಾನ ನೀಡಿದ್ದು, ಇದಲ್ಲದೆ ₹999.30 ಕೋಟಿ ಸರ್ಕಾರಿ ಶಾಲೆಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ಈ ಎಲ್ಲ ಹಣ ಕನ್ನಡ ಭಾಷೆಯ ಅಭಿವೃದ್ದಿಗೆ ಸಂಬಂಧಿಸಿದಂತೆಯೇ ಖರ್ಚಾಗುತ್ತಿದೆ,” ಎಂದು ತಿಳಿಸಿದ್ದಾರೆ.
ಉರ್ದು ಶಾಲೆಗಳ ಅಭಿವೃದ್ಧಿಗೆ ಅನುದಾನ:
“ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯಿರುವ ಉರ್ದು ಮಾಧ್ಯಮ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅವುಗಳನ್ನು ಮೌಲಾನ ಪಬ್ಲಿಕ್ ಶಾಲೆಗಳೆಂದು ಉನ್ನತೀಕರಿಸುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ₹100 ಕೋಟಿ ಅನುದಾನ ಒದಗಿಸಲಾಗಿದೆ. ಈ ಅನುದಾನ ಶೈಕ್ಷಣಿಕ ಮೂಲಸೌಕರ್ಯ, ಶಿಕ್ಷಕರ ನೇಮಕ, ಪಠ್ಯಪುಸ್ತಕ ಹಾಗೂ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುತ್ತದೆ. ಇದನ್ನು ಕೇವಲ ಭಾಷಾ ಕಲಿಕೆಗೆ ಮಾತ್ರ ಎನ್ನುವುದು ಸತ್ಯವಲ್ಲ,” ಎಂದು ಸ್ಪಷ್ಟಪಡಿಸಿದರು.
ಭಾಷೆ-ಧರ್ಮ ಜೋಡಿಕೆ ಅಪಮಾನ:
“ಕನ್ನಡ, ಉರ್ದು ಅಥವಾ ಇತರ ಭಾಷೆಗಳನ್ನು ನಿರ್ದಿಷ್ಟ ಜಾತಿ ಅಥವಾ ಧರ್ಮಕ್ಕೆ ಜೋಡಿಸುವುದು ಅಪಮಾನಕರವಾಗಿದೆ. ನಮ್ಮ ಸರ್ಕಾರ ರಾಜ್ಯದ ಎಲ್ಲ ಭಾಷೆಗಳ ಪ್ರಗತಿಗೆ ಸಮಾನ ಕಾಳಜಿ ಹೊಂದಿದೆ. ತುಳು, ಕೊಂಕಣಿ, ಅರೆಬಾಸೆ, ಕೊಡವ ಭಾಷೆಗಳಿಗಾಗಿ ಪ್ರತ್ಯೇಕ ಅಕಾಡೆಮಿಗಳನ್ನು ಸ್ಥಾಪಿಸಲಾಗಿದ್ದು, ಪ್ರತಿವರ್ಷ ₹80 ಲಕ್ಷಗಳ ಅನುದಾನ ನೀಡಲಾಗುತ್ತಿದೆ,” ಎಂದು ಸಿದ್ದರಾಮಯ್ಯ ವಿವರಿಸಿದರು.
ಕನ್ನಡ ಪರ ನಿಲುವು:
“ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರತಾಗಿ, 14 ಅಕಾಡೆಮಿಗಳು, 3 ಪ್ರಾಧಿಕಾರಗಳು ಹಾಗೂ 24 ಸಾಹಿತಿಗಳ ಹೆಸರಿನ ಟ್ರಸ್ಟ್ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ ಕನ್ನಡಿಗರಿಗಾಗಿ ಮೀಸಲಾಗಿವೆ. ನಾವು ಕನ್ನಡಿಗೆ ತಾಯಿಯ ಸ್ಥಾನ ನೀಡಿದಂತೆ, ಸರ್ಕಾರವೂ ನೀಡಿದೆ. ನಾಡು-ನುಡಿಗೆ ಯಾವುದೇ ಅವಮಾನವನ್ನು ಸಹಿಸಲಾಗದು,” ಎಂದು ಅವರು ದೃಢವಾಗಿ ಹೇಳಿದರು.
ಬಿಜೆಪಿಗೆ ಮನವಿ:
“ಕನ್ನಡ ಭಾಷೆಗೆ ಕೇವಲ ₹32 ಕೋಟಿ ನೀಡಲಾಗಿದೆ ಎಂಬ ಸುಳ್ಳು ಮಾಹಿತಿ ಹಂಚಿಕೆ ಅಕ್ಷಮ್ಯ ಅಪರಾಧವಾಗಿದೆ. ಇದು ನಾಡು-ನುಡಿಗೆ ಬಗೆವ ದ್ರೋಹವಾಗಿದೆ. ರಾಜ್ಯ ಬಿಜೆಪಿ ತಕ್ಷಣ ಸ್ಪಷ್ಟೀಕರಣ ನೀಡಬೇಕು ಮತ್ತು ರಾಜ್ಯದ ಜನತೆಯ ಕ್ಷಮೆ ಕೋರಬೇಕು,” ಎಂದು ಸಿದ್ದರಾಮಯ್ಯ ಆಗ್ರಹಿಸಿದರು.