ನಂಜನಗೂಡು/ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಒಂದು ಯುವಕನು ಅಪ್ಲೋಡ್ ಮಾಡಿದ್ದ ವೀಡಿಯೋ ನೋಡಿ, ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ 24 ವರ್ಷದ ಯುವತಿ ಪೂಜಾ ಅವರ ನಿವಾಸಕ್ಕೆ ಭೇಟಿ ನೀಡಿ ಸಹಾಯ ಹಸ್ತ ಚಾಚಿದರು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ.
ಹುಲ್ಲಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಪೂಜಾ ಅವರು ಬೆನ್ನಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಉಂಟಾದ ಅಡ್ಡಪರಿಣಾಮದಿಂದ ಎರಡೂ ಕಾಲುಗಳು ಸಂಪೂರ್ಣವಾಗಿ ಸ್ಥಬ್ಧಗೊಂಡಿವೆ. ಹಲವು ಶಸ್ತ್ರಚಿಕಿತ್ಸೆಗಳು ನಡೆದರೂ ಗುಣಮುಖಿಯಾಗದೆ ಹಲವು ತಿಂಗಳುಗಳಿಂದ ಹಾಸಿಗೆಯಲ್ಲೇ ಇದ್ದಾರೆ. ಅವರ ಪತಿ ರವಿ ಕೂಡ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡು ದುಡಿಮೆ ಮಾಡಲಾರದ ಸ್ಥಿತಿಯಲ್ಲಿದ್ದಾರೆ. ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.

ಯುವಕ ಚೇತನ್ ಅವರು ಪೂಜಾ ಅವರ ಸಂಕಷ್ಟದ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋ ವೈರಲ್ ಆಗಿ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ಬಂದಿತು. ಇದರಿಂದ ಪ್ರೇರಿತರಾದ ಸಚಿವರು ಶುಕ್ರವಾರ ಖುದ್ದಾಗಿ ಹುಲ್ಲಳ್ಳಿ ಗ್ರಾಮಕ್ಕೆ ತೆರಳಿ ಪೂಜಾ ಅವರ ಮನೆಗೆ ಭೇಟಿ ನೀಡಿದರು.

ವಸತಿ ಸಮಸ್ಯೆಗೆ ಶೀಘ್ರ ಪರಿಹಾರದ ಭರವಸೆ
ಕುಟುಂಬಕ್ಕೆ ಸ್ವಂತ ಮನೆ ಇಲ್ಲದಿರುವುದನ್ನು ತಿಳಿದ ಸಚಿವರು, ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಲೀಸ್ ಮನೆ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು. ಬಾಡಿಗೆ ಹಣವನ್ನು ಸ್ವತಃ ತಾವೇ ನೀಡುವುದಾಗಿ ಹೇಳಿದರು. ಪರ್ಯಾಯ ವ್ಯವಸ್ಥೆ ಕಂಡುಹಿಡಿಯುವಂತೆ ಸ್ಥಳೀಯ ಜೆಡಿಎಸ್ ನಾಯಕರಾದ ಶಾಸಕ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎನ್. ಮಂಜೇಗೌಡ, ಮಾಜಿ ಶಾಸಕ ಮಹದೇವ್ ಮತ್ತು ಅಶ್ವಿನ್ ಅವರಿಗೆ ಜವಾಬ್ದಾರಿ ವಹಿಸಿದರು.
ಇದಲ್ಲದೆ, ಮೈಸೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರೊಂದಿಗೆ ಚರ್ಚಿಸಿ ಕುಟುಂಬಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವುದಾಗಿ ತಿಳಿಸಿದರು.

ಆರ್ಥಿಕ ಮತ್ತು ಚಿಕಿತ್ಸಾ ನೆರವು
ಸ್ಥಳದಲ್ಲೇ ಪೂಜಾ ಅವರ ಚಿಕಿತ್ಸೆಗೆ ಧನಸಹಾಯ ನೀಡಿದ ಸಚಿವರು, ಪೂಜಾ ಮತ್ತು ಅವರ ಪತಿ ರವಿ ಅವರಿಗೆ ಮೈಸೂರಿನಲ್ಲಿ ಉತ್ತಮ ಚಿಕಿತ್ಸೆ ಒದಗಿಸುವಂತೆ ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.
ಪೂಜಾ ಅವರ ಪತಿ ರವಿ ಅವರ ಕೆಎಸ್ಆರ್ಟಿಸಿ ಬಸ್ ಅಪಘಾತ ಪ್ರಕರಣದಲ್ಲಿ ತ್ವರಿತ ಪರಿಹಾರ ಒದಗಿಸುವಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಸೂಚಿಸಿದರು. ಲೋಕ ಅದಾಲತ್ನಲ್ಲಿ ಪ್ರಕರಣಕ್ಕೆ ಮುಕ್ತಾಯ ಕಾಣಿಸಿ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ಕೆಎಸ್ಆರ್ಟಿಸಿ ಎಂಡಿ ನೀಡಿದರು.
ಇದಲ್ಲದೆ, ಕುಟುಂಬಕ್ಕೆ ಜೀವನಾಧಾರಕ್ಕಾಗಿ ಒಂದು ಅಂಗಡಿ ನೀಡುವ ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್ಗೆ ಸೂಚನೆ ನೀಡಲಾಯಿತು. ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಭರವಸೆಯನ್ನು ವಿಧಾನ ಪರಿಷತ್ ಸದಸ್ಯ ಎಸ್.ಎನ್. ಮಂಜೇಗೌಡ ನೀಡಿದರು.
ಯುವಕ ಚೇತನ್ಗೆ ಪ್ರಶಂಸೆ
ಪೂಜಾ ಅವರ ಸಮಸ್ಯೆಯನ್ನು ವೀಡಿಯೋ ಮೂಲಕ ತನ್ನ ಗಮನಕ್ಕೆ ತಂದ ಯುವಕ ಚೇತನ್ ಅವರನ್ನು ಸಚಿವರು ಶ್ಲಾಘಿಸಿದರು. ಚೇತನ್ ಅವರು ಸಚಿವರಿಗೆ ಧನ್ಯವಾದ ಸಲ್ಲಿಸಿದರು.
ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಸಚಿವರು
ಇದೇ ದಿನ ಬೆಳಗ್ಗೆ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಚಿವರು, ನಂತರ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ನಾಡಿಗೆ ಒಳ್ಳೆಯದಾಗಲಿ, ಎಲ್ಲೆಡೆ ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಸ್ಥಳದಲ್ಲಿ ಜೆಡಿಎಸ್ ಪಕ್ಷದ ಹಲವು ನಾಯಕರು ಉಪಸ್ಥಿತರಿದ್ದರು.












