24 ಸಾವಿರ ಹೆಕ್ಟೇರ್ ಹನಿ ನೀರಾವರಿ ವಿಫಲ – ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸೂಚನೆ; ಯುಕೆಪಿ-3 ಭೂಸ್ವಾಧೀನದಲ್ಲಿ ಶಾಸಕರ ಒತ್ತಡಕ್ಕೆ ಮಣಿಯಬೇಡಿ
ಬೆಂಗಳೂರು: ಉತ್ತರ ಕರ್ನಾಟಕದ ಜೀವನಾಡಿಯಾದ ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್ಎಲ್) ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕಳಪೆ ಕಾಮಗಾರಿ ಸಹಿಸುವುದಿಲ್ಲ, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ತಾಕೀತು ಮಾಡಿದರು.
ಕೆಬಿಜೆಎನ್ಎಲ್ ವ್ಯಾಪ್ತಿಯ ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ ಮತ್ತು ಗದಗ ಸೇರಿದಂತೆ ಏಳು ಜಿಲ್ಲೆಗಳು, ಐದು ವಲಯಗಳು, 46 ತಾಲೂಕುಗಳು ಹಾಗೂ 33 ವಿಧಾನಸಭಾ ಕ್ಷೇತ್ರಗಳ ಸಮಗ್ರ ಮಾಹಿತಿ, ಸಿಬ್ಬಂದಿ ವಿವರ ಮತ್ತು ಕೆರೆ ತುಂಬಿಸುವ ಯೋಜನೆಗಳ ಬಗ್ಗೆ ಸಚಿವರು ಸಭೆಯಲ್ಲಿ ಮಾಹಿತಿ ಪಡೆದರು.
24 ಸಾವಿರ ಹೆಕ್ಟೇರ್ ಹನಿ ನೀರಾವರಿ ವಿಫಲ
24 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಒದಗಿಸಲಾದ ಹನಿ ನೀರಾವರಿ ನಿರೀಕ್ಷಿತ ಯಶಸ್ಸು ಕಾಣದಿರುವುದರ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆ ಪಡೆದವರು ಸರಿಯಾಗಿ ನೀರು ಪೂರೈಸುತ್ತಿಲ್ಲ ಹಾಗೂ ಐದು ವರ್ಷಗಳ ನಿರ್ವಹಣಾ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸುವುದಾಗಿ ಘೋಷಿಸಿದರು. ಕೇವಲ ನ್ಯಾಯಾಲಯದ ನೆಪ ಹೇಳಿ ಕಾಮಗಾರಿ ವಿಳಂಬ ಮಾಡುವುದನ್ನು ಸಹಿಸುವುದಿಲ್ಲ. ಪ್ರತಿಯೊಂದು ಸಮಸ್ಯೆಗೂ ತ್ವರಿತ ಪರಿಹಾರ ಒದಗಿಸಬೇಕು ಎಂದು ಖಡಕ್ ನಿರ್ದೇಶನ ನೀಡಿದರು.
ಯುಕೆಪಿ-3ಕ್ಕೆ 1.33 ಲಕ್ಷ ಹೆಕ್ಟೇರ್ ಭೂಸ್ವಾಧೀನ ಸವಾಲು
ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ-3)ಗಾಗಿ ಕಾಲುವೆ ಮತ್ತು ಹಳ್ಳಿಗಳು ಸೇರಿ ಒಟ್ಟು 1,33,887 ಹೆಕ್ಟೇರ್ ಭೂಸ್ವಾಧೀನದ ಬೃಹತ್ ಸವಾಲು ಎದುರಾಗಿದೆ. ಇದರಿಂದ 100 ಟಿಎಂಸಿ ನೀರು ಶೇಖರಣೆ ಸಾಧ್ಯವಾಗಲಿದೆ. 184 ಗ್ರಾಮಗಳ ಪೈಕಿ 87 ಗ್ರಾಮಗಳಿಗೆ ಶೀಘ್ರ ನೋಟಿಫಿಕೇಷನ್ ಹೊರಡಿಸುವ ಪ್ರಕ್ರಿಯೆಯಲ್ಲಿ ಎದುರಾಗುವ ರಾಜಕೀಯ ಹಾಗೂ ಸ್ಥಳೀಯ ಶಾಸಕರ ಒತ್ತಡಗಳಿಗೆ ಮಣಿಯಬೇಡಿ ಎಂದು ಅಧಿಕಾರಿಗಳಿಗೆ ಸಚಿವರು ಅಭಯ ನೀಡಿದರು. ಕಾನೂನು ಪ್ರಕಾರವೇ ಭೂಸ್ವಾಧೀನ ನಡೆಯಬೇಕು ಎಂದು ಸ್ಪಷ್ಟಪಡಿಸಿದರು. ಈ ಕುರಿತು ಪ್ರಾದೇಶಿಕ ಆಯುಕ್ತರು ಮತ್ತು ಜನರಲ್ ಮ್ಯಾನೇಜರ್ರೊಂದಿಗೆ ವಿಶೇಷ ಸಭೆ ನಡೆಸುವುದಾಗಿ ತಿಳಿಸಿದರು.
ಯುಕೆಪಿ 1, 2 ಮತ್ತು 3 ಹಂತದ ಕೋರ್ಟ್ ಕೇಸ್ಗಳನ್ನು ಶೀಘ್ರ ಇತ್ಯರ್ಥಪಡಿಸಲು ಪ್ರತ್ಯೇಕ ಕಡತ ಸಿದ್ಧಪಡಿಸಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ವಿಜಯಪುರ ಭಾಗದ ತೋಟಗಾರಿಕಾ ರೈತರಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ನಂದವಾಡಗಿ, ಕೆರೂರು, ಬೂದಿಹಾಳ, ಭಗವತಿ, ಪಾಮನಕಲ್ಲೂರು ಮತ್ತು ಚಡಚಣ ಸೇರಿದಂತೆ ಏತ ನೀರಾವರಿ ಯೋಜನೆಗಳಿಗೆ ವೇಗ ನೀಡಬೇಕು. ಸ್ಥಗಿತಗೊಂಡ ಕಾಮಗಾರಿಗಳಿಗೆ ಮರು ಟೆಂಡರ್ ಕರೆದು ಸಾರ್ವಜನಿಕ ಹಣ ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು. ಕೇಂದ್ರದಿಂದ ಬರಬೇಕಾದ ಅನುದಾನ ಪಡೆಯಲು ಶ್ರಮಿಸುವಂತೆ ಸೂಚಿಸಿದರು. ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಯಾಂತ್ರೀಕೃತ ಗೇಟ್ ಅಳವಡಿಸಿ ನೀರಿನ ದಕ್ಷತೆ ಹೆಚ್ಚಿಸಿರುವುದು ಹಾಗೂ ರೈತರು ಆ್ಯಪ್ ಮೂಲಕ ನೀರಿನ ಬೇಡಿಕೆ ಸಲ್ಲಿಸುವ ವ್ಯವಸ್ಥೆಯನ್ನು ಸಚಿವರು ಶ್ಲಾಘಿಸಿದರು.
“ಕಳ್ಳಾಟ ಬಯಲಾದರೆ ಸುಮ್ಮನೆ ಬಿಡಲ್ಲ”
“ಯಾವುದೇ ಸೇತುವೆ ಅಥವಾ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಇಲ್ಲ. ಅಂದಾಜು ಪಟ್ಟಿ ತಯಾರಿಸುವಾಗ ಎಚ್ಚರಿಕೆ ವಹಿಸಿ. ನಾನು ಪರಿಶೀಲನೆ ನಡೆಸಿದಾಗ ಅಧಿಕಾರಿಗಳ ಕಳ್ಳಾಟ ಬಯಲಾದರೆ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಜಿಲ್ಲಾಡಳಿತಕ್ಕೆ ನೀಡಿದ ಸರ್ಕಾರಿ ಹಣದ ನಯಾ ಪೈಸೆಯೂ ದುರ್ಬಳಕೆಯಾಗಬಾರದು” ಎಂದು ಸಚಿವರು ನೇರ ಎಚ್ಚರಿಕೆ ನೀಡಿದರು. ಸಿಬ್ಬಂದಿ ಕೊರತೆ ಮತ್ತು ಅನುದಾನ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಗುತ್ತಿಗೆದಾರರಿಗೆ ಅಭಯ
ನಂತರ ಗುತ್ತಿಗೆದಾರರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಅನುದಾನ ಬಿಡುಗಡೆ, ಶೇ.50 ಠೇವಣಿ ಮತ್ತು ಕಾರ್ಯಾದೇಶ ವಿಳಂಬ ಸಮಸ್ಯೆಗಳನ್ನು ಆಲಿಸಿ, “ನಾನು ಕೂಡ ಈ ಹಿಂದೆ ಗುತ್ತಿಗೆದಾರನಾಗಿದ್ದೆ. ನಿಮ್ಮ ಸಮಸ್ಯೆಗಳ ಅರಿವು ನನಗಿದೆ. ಶೀಘ್ರ ಬಗೆಹರಿಸುತ್ತೇನೆ” ಎಂದು ಭರವಸೆ ನೀಡಿದರು.
ಸಭೆಯಲ್ಲಿ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇಲಾಖೆ ಅಧಿಕಾರಿಗಳು ಹಾಜರಿದ್ದರು.











