ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ‘ರಿಯಲ್ ಎಸ್ಟೇಟ್ ಏಜೆಂಟ್ ಸಿಎಂ’ ಎಂದು ವ್ಯಂಗ್ಯವಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸರ್ಕಾರದ ನೂರು ದಿನಗಳನ್ನು ‘ಕರಾಳ ದಿನ’ ಎಂದು ಕರೆದಿದ್ದಾರೆ. “ದೇವಸ್ಥಾನ, ವಿಭೂತಿ, ನಾಮದಲ್ಲೇ ನೂರು ದಿನ ಮುಗಿದಿದೆ. ಜನರಿಗೆ ಸಿಕ್ಕಿದ್ದು ಕೇವಲ ಮೂರು ದಿನ. ಇದೊಂದು ಯೂಟರ್ನ್ ಸರ್ಕಾರ,” ಎಂದು ಅವರು ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ಸರ್ಕಾರದ ನೂರು ದಿನಗಳ ಸಾಧನೆಯನ್ನು ಕಟುವಾಗಿ ಟೀಕಿಸಿದರು. “ಇಡೀ ಸರ್ಕಾರದ ನೂರು ದಿನದ ಗೊಂದಲ ಗೂಡು ನಿವಾರಣೆಗೆ ಡಿಕೆಶಿ ಸತತ ದೆಹಲಿ ಯಾತ್ರೆ ಮಾಡಿದರು. ಜಾಹೀರಾತು ಮತ್ತು ಮಾಧ್ಯಮ ಗೋಷ್ಠಿಗಳಲ್ಲೇ ತೊಡಗಿದ್ದರು,” ಎಂದು ಅವರು ಆರೋಪಿಸಿದರು.
ರಿಯಲ್ ಎಸ್ಟೇಟ್ ದಂಧೆಯ ಆರೋಪ ಮಾಡುತ್ತಾ, ಲಾಲ್ಬಾಗ್, ಸ್ಯಾಂಕಿ ಟ್ಯಾಂಕ್, ಹೆಬ್ಬಾಳ ಕೆರೆ ಜಾಗ ನುಂಗುವ ಪ್ರಯತ್ನ, ಬಿಡದಿ ಟೌನ್ಶಿಪ್ನಲ್ಲಿ ಒಂಬತ್ತು ಸಾವಿರ ಎಕರೆ ಹಾಗೂ ಆನೇಕಲ್ನಲ್ಲಿ ಕೆಐಎಡಿಬಿ ಹೆಸರಲ್ಲಿ ಮೂರು ಸಾವಿರ ಎಕರೆ ನುಂಗುವ ಯೋಜನೆಗಳನ್ನು ಸರ್ಕಾರದ ‘ಸಾಧನೆ’ಗಳೆಂದು ಅವರು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಭೀಕರ ಬರವಿದ್ದರೂ ನಾಲ್ಕು ತಿಂಗಳಲ್ಲಿ ಯಾರಿಗೂ ಬರ ಪರಿಹಾರ ನೀಡದಿರುವುದು, ಬರಕ್ಕೆ ಹಣ ಬಿಡುಗಡೆ ಮಾಡದಿರುವುದು ಮತ್ತು ಕಾಂಗ್ರೆಸ್ ಸರ್ಕಾರ ಬಂದ ನಂತರ 2500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಮೌನ ವಹಿಸಿದ್ದನ್ನು ಅವರು ತೀವ್ರವಾಗಿ ಖಂಡಿಸಿದರು. ಗುಂಡಿಗೆ ಬಿದ್ದು ಸತ್ತವರ ವಿಚಾರದಲ್ಲಿ ಒಂದು ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ ಎಂದೂ ಆರೋಪಿಸಿದರು.
ಉದ್ಯಾನ ಜಾಗದಲ್ಲಿ ಶೇಕಡಾ ಐದರಷ್ಟು ಜಾಗವನ್ನು ರಿಯಲ್ ಎಸ್ಟೇಟ್ಗೆ ನೀಡಲು ಮುಂದಾಗಿದ್ದ ಸರ್ಕಾರ ಜನರ ವಿರೋಧದ ನಂತರ ಹಿಂದೆ ಸರಿದಿದೆ ಎಂದು ಹೇಳಿದ ಅಶೋಕ್, ಲಾಲ್ಬಾಗ್ನಲ್ಲಿ 15 ಎಕರೆ ಅದಾನಿಗೆ ಕೊಡುತ್ತೇವೆ ಎಂದು ಹೇಳಿ ನಂತರ ಯೂಟರ್ನ್ ಹೊಡೆದಿರುವುದನ್ನು ಉದಾಹರಿಸಿದರು. ಕಾವೇರಿ ವಿಚಾರದಲ್ಲಿ ನಾಲ್ಕು ಬಾರಿ ಹಿನ್ನಡೆಯಾಗಿರುವುದು, ಪಿಡಿ ಖಾತೆಯ ಹಣವನ್ನು ಬರಕ್ಕೆ ಬಳಸಲಾಗದಿರುವುದು ಮತ್ತು ಸರ್ಕಾರ ದಿವಾಳಿಯಾಗಿರುವುದನ್ನು ಅವರು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಐದು ಸಾವಿರ ಕೋಟಿ ರೂಪಾಯಿ ‘ತಿಂದಿರುವ’ ಆರೋಪ ಮಾಡಿದ ಅಶೋಕ್, “ಕದ್ದಿರುವುದೇ ಇವರ ಸಾಧನೆ. ಡಿಕೆಶಿ ಅವರು ಮುಖ್ಯಮಂತ್ರಿಯಾದ ಮೇಲೆ ಕೇವಲ ಘೋಷಣೆಗಳನ್ನೇ ಭರಪೂರ ಮಾಡುತ್ತಾರೆ. ಬ್ರ್ಯಾಂಡ್ ಬೆಂಗಳೂರು ಕಸದ ಬುಟ್ಟಿಗೆ ಬಿದ್ದಿದೆ,” ಎಂದರು. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರನ್ನು ‘ರೀಲ್ ಮಾಸ್ಟರ್’ ಎಂದು ಕರೆದ ಅವರು, ಕಸದಿಂದ ಸ್ವಾತಂತ್ರ್ಯದ ಘೋಷಣೆ ಮಾಡಿದ್ದರೂ ಡಿಕೆಶಿ ಅವರ ಮನೆ ಮುಂದೆಯೇ ಕಸದ ರಾಶಿ ಇದೆ ಎಂದು ಹೇಳಿದರು.
ತೆರಿಗೆಗಳನ್ನು ಹೆಚ್ಚಿಸಿರುವುದು, ಕಸ ಶುಲ್ಕವನ್ನು 40 ರೂಪಾಯಿಯಿಂದ 400 ರೂಪಾಯಿಗೆ ಏರಿಸಿರುವುದು, ಮುದ್ರಾಂಕ ಸುಂಕ ದುಪ್ಪಟ್ಟಾಗಿರುವುದು ಮತ್ತು ಬೆಂಗಳೂರನ್ನು ‘ಗುಂಡಿಗಳ ನಗರ’ವನ್ನಾಗಿ ಮಾಡಿರುವುದನ್ನು ಅವರು ಟೀಕಿಸಿದರು. ಜಿಬಿಎ ಚುನಾವಣೆಯನ್ನು ಮುಂದೂಡುತ್ತಿರುವುದು ಇದಕ್ಕೆ ಸಂಬಂಧಿಸಿದೆ ಎಂದು ಅವರು ಆರೋಪಿಸಿದರು.
ಮೋದಿ ಅವರ ಕಿಸಾನ್ ಸಮ್ಮಾನ್ ಯೋಜನೆಗೆ ಬಿಜೆಪಿ ಸರ್ಕಾರ ಸೇರಿಸಿದ್ದ ಹೆಚ್ಚುವರಿ ನಾಲ್ಕು ಸಾವಿರ ರೂಪಾಯಿಯನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿರುವುದು ಮತ್ತು ವಿದ್ಯಾನಿಧಿ ಯೋಜನೆಗೆ ಕಲ್ಲು ಹಾಕಿರುವುದನ್ನು ಉಲ್ಲೇಖಿಸಿ, “ಇದು ರೈತ ಪರ ಸರ್ಕಾರವಲ್ಲ. ಜನರ ನಂಬಿಕೆಗೆ ದ್ರೋಹ ಬಗೆದ ವಿಶ್ವಾಸದ್ರೋಹಿ ಸರ್ಕಾರ. ಸಾಧನೆ ಶೂನ್ಯ,” ಎಂದು ಅಶೋಕ್ ಹೇಳಿದರು.
ಕೆಪಿಎಸ್ಸಿ ಹಗರಣ ಮತ್ತು ಎಂಜಿನಿಯರ್ ನೇಮಕಾತಿಯಲ್ಲಿ ಬೋಗಸ್ ಮಾಡಿರುವುದಕ್ಕೆ ಸಾಕ್ಷಿ ಇದೆ ಎಂದು ಆರೋಪಿಸಿದ ಅವರು, ಬಿಜೆಪಿ ಸರ್ಕಾರದ ಹಳೆ ಯೋಜನೆಗಳಿಗೆ ಹೊಸ ಹೆಸರು ಕೊಟ್ಟು ಜಾರಿ ಮಾಡುತ್ತಿರುವುದನ್ನು ಟೀಕಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ್, ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.











