ಕೋಲ್ಕತ್ತಾ ಬಂದರಿನಿಂದ ನೇಪಾಳದ ಬಿರಾಟ್ನಗರಕ್ಕೆ ಮೊದಲ ನೇರ ವಾಣಿಜ್ಯ ಕಂಟೇನರ್ ಸರಕು ರೈಲು ಯಶಸ್ವಿಯಾಗಿ ತಲುಪಿದೆ. ಇದು ಭಾರತ-ನೇಪಾಳ ಗಡಿಯಾಚೆಗಿನ ಸರಕು ಸಂಪರ್ಕದಲ್ಲಿ ಮಹತ್ವದ ಮೈಲಿಗಲ್ಲು ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.
ಕ್ಯಾನೋಲಾ ಸರಕನ್ನು ಹೊತ್ತ 40 ವ್ಯಾಗನ್ಗಳ ಈ ರೈಲು, ಪರಿಷ್ಕೃತ ಭಾರತ-ನೇಪಾಳ ರೈಲು ಸಾರಿಗೆ ಪ್ರೋಟೋಕಾಲ್ ಅಡಿಯಲ್ಲಿ ಕಾರ್ಯನಿರ್ವಹಿಸಿದೆ. ಕೋಲ್ಕತ್ತಾ ಬಂದರಿನಿಂದ ಬಿರಾಟ್ನಗರ ಕಸ್ಟಮ್ಸ್ ಯಾರ್ಡ್ವರೆಗೆ ಗಡಿಯಾಚೆಗಿನ ಟ್ರಾನ್ಸ್ಶಿಪ್ಮೆಂಟ್ ಇಲ್ಲದೇ ಕಂಟೇನರೈಸ್ಡ್ ಸರಕುಗಳನ್ನು ನೇರವಾಗಿ ಸಾಗಿಸುವುದು ಇದರ ವಿಶೇಷತೆ.
ಈ ಹೊಸ ವ್ಯವಸ್ಥೆಯಿಂದ ಸಾಗಣೆ ಸಮಯ, ಲಾಜಿಸ್ಟಿಕ್ಸ್ ವೆಚ್ಚ ಮತ್ತು ಸರಕು ನಿರ್ವಹಣೆ ಗಣನೀಯವಾಗಿ ಕಡಿಮೆಯಾಗಲಿದೆ. ಎರಡೂ ದೇಶಗಳ ನಡುವಿನ ವ್ಯಾಪಾರದ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚುವ ನಿರೀಕ್ಷೆಯಿದೆ.
ಈ ಸಾಧನೆಗೆ ಜೋಗ್ಬಾನಿ (ಭಾರತ) ಮತ್ತು ಬಿರಾಟ್ನಗರ (ನೇಪಾಳ) ನಡುವಿನ ಬ್ರಾಡ್-ಗೇಜ್ ರೈಲು ಸಂಪರ್ಕ ಆಧಾರ. 2023ರ ಜೂನ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಂದಿನ ನೇಪಾಳದ ಪ್ರಧಾನಮಂತ್ರಿ ಇದನ್ನು ಉದ್ಘಾಟಿಸಿದ್ದರು. 2025ರ ನವೆಂಬರ್ನಲ್ಲಿ ಪರಿಷ್ಕೃತ ವಿನಿಮಯ ಪತ್ರ (LoE)ಗೆ ಸಹಿ ಹಾಕಿದ ನಂತರ ಬಿರಾಟ್ನಗರಕ್ಕೆ ನೇರ ವಾಣಿಜ್ಯ ರೈಲು ಸಂಚಾರ ಆರಂಭವಾಗಿದೆ.
ನೇರ ಸರಕು ಸೇವೆಯು ವೇಗವಾದ, ಆರ್ಥಿಕ ಮತ್ತು ಪರಿಸರೀಯವಾಗಿ ಸುಸ್ಥಿರ ಸಾರಿಗೆ ವಿಧಾನವನ್ನು ಒದಗಿಸುತ್ತದೆ. ಬಹು ನಿರ್ವಹಣಾ ಬಿಂದುಗಳನ್ನು ಕಡಿಮೆ ಮಾಡಿ ಪೂರೈಕೆ ಸರಪಳಿ ದಕ್ಷತೆಯನ್ನು ಸುಧಾರಿಸುವುದರಿಂದ ರಫ್ತುದಾರರು, ಆಮದುದಾರರು, ಲಾಜಿಸ್ಟಿಕ್ಸ್ ನಿರ್ವಾಹಕರು ಮತ್ತು ಗಡಿಯಾಚೆಗಿನ ವ್ಯಾಪಾರದಲ್ಲಿ ತೊಡಗಿರುವ ಕೈಗಾರಿಕೆಗಳಿಗೆ ಪ್ರಯೋಜನವಾಗಲಿದೆ.
ಅಂತಾರಾಷ್ಟ್ರೀಯ ರೈಲು ಸಂಪರ್ಕ ವಿಸ್ತರಣೆ, ಸರಕು ಸಾಗಣೆ ಬಲಪಡಿಸುವಿಕೆ ಮತ್ತು ಆಧುನಿಕ ಸಾರಿಗೆ ಮೂಲಸೌಕರ್ಯದ ಮೂಲಕ ವ್ಯವಹಾರ ಸುಲಭಗೊಳಿಸುವ ಸರ್ಕಾರದ ನೀತಿಗೆ ಈ ಮೈಲಿಗಲ್ಲು ಪ್ರತಿಬಿಂಬಿಸುತ್ತದೆ. ಹೆಚ್ಚಿದ ರೈಲು ಆಧಾರಿತ ಸರಕು ಸಾಗಣೆಯು ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಮಾಡಿ, ಸರಕು ವಿಶ್ವಾಸಾರ್ಹತೆ ಹೆಚ್ಚಿಸಿ, ಹಸಿರು ಸಾರಿಗೆಗೆ ಕೊಡುಗೆ ನೀಡುತ್ತದೆ ಮತ್ತು ನೆರೆಯ ರಾಷ್ಟ್ರಗಳೊಂದಿಗೆ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುತ್ತದೆ.
ನೇಪಾಳಕ್ಕೆ ಮೊದಲ ನೇರ ವಾಣಿಜ್ಯ ಕಂಟೇನರ್ ಸರಕು ರೈಲಿನ ಯಶಸ್ವಿ ಕಾರ್ಯಾಚರಣೆ, ಪ್ರಾದೇಶಿಕ ವ್ಯಾಪಾರ, ಆರ್ಥಿಕ ಬೆಳವಣಿಗೆ ಮತ್ತು ತಡೆರಹಿತ ಅಂತಾರಾಷ್ಟ್ರೀಯ ಸಂಪರ್ಕವನ್ನು ಬೆಂಬಲಿಸುವ ಭಾರತೀಯ ರೈಲ್ವೆಯ ಪ್ರಯತ್ನಗಳಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.











