ಬೆಂಗಳೂರು: ಹಣ ಖರ್ಚು ಮಾಡಿ ಸ್ಥಾನಮಾನ ಹಾಗೂ ಪ್ರಚಾರ ಪಡೆಯುವುದು ಸುಲಭವಾದರೂ, ಜನಸಾಮಾನ್ಯರ ಹೃದಯದಲ್ಲಿ ಸ್ಥಾನ ಗಳಿಸುವುದು ಕಷ್ಟ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
“ಧನನಾಯಕ ಆಗೋದು ಸುಲಭ, ಜನನಾಯಕ ಆಗೋದು ಕಷ್ಟ” ಎಂದು ಆರಂಭವಾಗಿರುವ ಹೇಳಿಕೆಯಲ್ಲಿ, ಸ್ವಪ್ರಚಾರ ಮತ್ತು ಇಮೇಜ್ ಮೇಕ್ಓವರ್ಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ, ಪತ್ರಿಕೆಗಳಲ್ಲಿ ಪೂರ್ಣಪುಟ ಜಾಹೀರಾತು ನೀಡಿದರೂ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದರೂ ಜನಸಾಮಾನ್ಯರಿಗೆ “ನಾನು ಯಾರು” ಎಂಬುದು ತಿಳಿದಿಲ್ಲ ಎಂಬ ವ್ಯಂಗ್ಯ ಮಾಡಲಾಗಿದೆ.
ನೂರು ದಿನಗಳ ಆಡಳಿತ ಪೂರ್ಣಗೊಂಡ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಹಾಗೂ ದೀಪಾಲಂಕಾರಕ್ಕೆ ಹಣ ಖರ್ಚು ಮಾಡುತ್ತಿರುವುದನ್ನೂ ಟೀಕಿಸಿರುವ ಹೇಳಿಕೆಯಲ್ಲಿ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸುವುದಕ್ಕಿಂತ ಜನರ ಹೃದಯದಲ್ಲಿ ಸ್ಥಾನ ಗಳಿಸುವುದು ಮುಖ್ಯ ಎಂದು ಹೇಳಲಾಗಿದೆ.
ಜನಸಾಮಾನ್ಯರಿಗೆ ತಮ್ಮ ಪರಿಚಯವಾಗಬೇಕಾದರೆ ಅವರ ಬದುಕಿನಲ್ಲಿ ಸ್ಪಷ್ಟವಾದ ಬದಲಾವಣೆ ತರಬೇಕು. ರಾಜ್ಯದ ಸಮಸ್ಯೆಗಳಿಗೆ ಘೋಷಣೆಗಳ ಬದಲಾಗಿ ಪರಿಹಾರ (Solution) ಅಗತ್ಯವಿದೆ ಎಂದು ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ.
ಜನರು ತಮ್ಮ ನೆನಪಿನಲ್ಲಿ ಉಳಿಸಿಕೊಳ್ಳುವುದು ಬದುಕು ಕಟ್ಟಿಕೊಳ್ಳಲು ಅವಕಾಶಗಳನ್ನು ಸೃಷ್ಟಿಸಿದ ನಾಯಕರನ್ನೇ ಹೊರತು, ಕೇವಲ ಅದ್ಧೂರಿ ಸಮಾವೇಶಗಳು ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿದವರನ್ನಲ್ಲ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಮೂಲಕ ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧವೂ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದ್ದು, #CongressFailsKarnataka ಎಂಬ ಹ್ಯಾಶ್ಟ್ಯಾಗ್ ಬಳಸಲಾಗಿದೆ.










