ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾ (BJYM) ರಾಷ್ಟ್ರೀಯ ಅಧ್ಯಕ್ಷ ಶ್ರೀ ತೇಜಸ್ವಿ ಸೂರ್ಯ ಅವರು ಹರಿದ್ವಾರದಿಂದ ಋಷಿಕೇಶಕ್ಕೆ ಪವಿತ್ರ ಗಂಗಾಜಲವನ್ನು ಹೊತ್ತು ಕಾವಡ್ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ನಂತರ ಆ ಗಂಗಾಜಲವನ್ನು ಬೆಂಗಳೂರಿಗೆ ತಂದು, ಬಸವನಗುಡಿಯ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಶಿವನಿಗೆ ಅರ್ಪಿಸಿದರು.
ಹರಿದ್ವಾರದ ಹರ್ ಕಿ ಪೌರಿಯಲ್ಲಿ ಗಂಗಾ ಸ್ನಾನ ಮಾಡುವ ಮೂಲಕ ಯಾತ್ರೆ ಆರಂಭಿಸಿದ ಶ್ರೀ ಸೂರ್ಯ ಅವರು, ನೂರಾರು ಯುವ ಭಕ್ತರೊಂದಿಗೆ ಗಂಗಾಜಲದ ಕಾವಡ್ ಹೊತ್ತು ಋಷಿಕೇಶದ ವೀರಭದ್ರ ಮಹಾದೇವ ದೇವಾಲಯದವರೆಗೆ 26 ಕಿ.ಮೀ. ಪಾದಯಾತ್ರೆ ನಡೆಸಿದರು.

ಈ ಯಾತ್ರೆಯು ಸಾಧನೆ (ಆತ್ಮಶಿಸ್ತು), ಸೇವೆ, ಸಮರಸತೆ (ಸಾಮಾಜಿಕ ಸಾಮರಸ್ಯ ಮತ್ತು ಒಳಗೊಳ್ಳುವಿಕೆ) ಹಾಗೂ ಸ್ವಚ್ಛತೆಯನ್ನು ಪ್ರಮುಖವಾಗಿ ಒತ್ತಿಹೇಳಿತು. ಮಾರ್ಗದುದ್ದಕ್ಕೂ ಭಕ್ತರಿಗೆ ಹಣ್ಣುಗಳನ್ನು ವಿತರಿಸಲಾಯಿತು, ಬಿಲ್ವಪತ್ರೆ ಸಸಿಗಳನ್ನು ನೆಡಲಾಯಿತು, ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಮತ್ತು ಸ್ಥಳೀಯ ಸಮುದಾಯದೊಂದಿಗೆ ಸಂವಾದ ನಡೆಸಲಾಯಿತು.
ತಮ್ಮ ಅನುಭವವನ್ನು ಹಂಚಿಕೊಂಡ ಶ್ರೀ ಸೂರ್ಯ, “ಹೆಚ್ಚಿನ ಕಾವಡ್ ಯಾತ್ರಿಕರು ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಆದರೆ ಅವರ ಭಕ್ತಿ, ಶಿಸ್ತು ಮತ್ತು ದೈಹಿಕ ಶ್ರಮ ವಹಿಸುವ ಸಾಮರ್ಥ್ಯ ಅಸಾಧಾರಣವಾದದ್ದು” ಎಂದು ಹೇಳಿದರು.
ಯಾತ್ರೆಯ ಮಾರ್ಗದುದ್ದಕ್ಕೂ ಕಂಡುಬಂದ ಸೇವಾ ಮನೋಭಾವದ ಬಗ್ಗೆ ಮಾತನಾಡಿದ ಅವರು, “ಸಾಮಾನ್ಯ ಜನರು ಯಾವುದೇ ಶುಲ್ಕವಿಲ್ಲದೆ ಯಾತ್ರಿಕರಿಗೆ ಆಹಾರ, ನೀರು, ವೈದ್ಯಕೀಯ ನೆರವು ಮತ್ತು ವಿಶ್ರಾಂತಿ ಪಡೆಯಲು ಸ್ಥಳಾವಕಾಶವನ್ನು ಒದಗಿಸುವ ಮೂಲಕ ಉಚಿತವಾಗಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದು ಗಮನಾರ್ಹ” ಎಂದು ಅಭಿಪ್ರಾಯಪಟ್ಟರು.

ಯಾತ್ರೆಯ ಸಾರಾಂಶವನ್ನು ವಿವರಿಸುತ್ತಾ, ಸಂಸದ ಸೂರ್ಯ ಅವರು ಭಾರತೀಯ ದಾರ್ಶನಿಕ ಮತ್ತು ಸಾಮಾಜಿಕ ಸುಧಾರಕ ಬಸವಣ್ಣನವರ ಅಮರ ವಚನವನ್ನು ಸ್ಮರಿಸಿದರು:
“ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡುವೆ ಬಡವನಯ್ಯ?
ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ.
ಕೂಡಲಸಂಗಮದೇವಾ ಕೇಳಯ್ಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.”
ಈ ವಚನವು ಕಾವಡ್ ಯಾತ್ರೆಯ ನಿಜವಾದ ಆತ್ಮವನ್ನು ಪ್ರತಿಬಿಂಬಿಸುತ್ತದೆ. ಭಕ್ತರು ತಮ್ಮದೇ ಆದ ಶ್ರಮ, ಶಿಸ್ತು ಮತ್ತು ಭಕ್ತಿಯನ್ನು ಶಿವನಿಗೆ ಅರ್ಪಿಸುತ್ತಾರೆ ಎಂದು ಅವರು ತಿಳಿಸಿದರು.
ಯಾತ್ರೆಯಲ್ಲಿ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗಿತ್ತು. ಯಾತ್ರಿಕರು ಮಾರ್ಗದುದ್ದಕ್ಕೂ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಂಡು, ಇತರ ಭಕ್ತರಿಗೂ ಪವಿತ್ರ ಸ್ಥಳಗಳು ಮತ್ತು ಯಾತ್ರಾ ಮಾರ್ಗವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಅರಿವು ಮೂಡಿಸಿದರು.

ಋಷಿಕೇಶದ ವೀರಭದ್ರ ದೇವಾಲಯದಲ್ಲಿ ಮಹಾದೇವನಿಗೆ ಪವಿತ್ರ ಗಂಗಾಜಲವನ್ನು ಅರ್ಪಿಸಿದ ನಂತರ, ಬೆಂಗಳೂರಿನ ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಅಂತಿಮ ಗಂಗಾಜಲ ಅಭಿಷೇಕ ಮಾಡುವ ಮೂಲಕ ಯಾತ್ರೆ ಪೂರ್ಣಗೊಂಡಿತು. “ಹರಿದ್ವಾರದ ಗಂಗೆಯಿಂದ ನಮ್ಮ ಬೆಂಗಳೂರಿನ ಗಂಗಾಧರನವರೆಗೆ, ಈ ಯಾತ್ರೆಯು ಸಂಪೂರ್ಣ ವೃತ್ತವನ್ನು ಪೂರ್ಣಗೊಳಿಸಿದೆ” ಎಂದು ಸಂಸದರು ಹೇಳಿದರು.
(ಪ್ರಕಟಣೆ: ಬೆಂಗಳೂರು ದಕ್ಷಿಣ ಸಂಸದರ ಕಚೇರಿ)











