ಹಾಸನ: ಜೈಲಿನ ವಿಷಯವನ್ನು ಎತ್ತಿ ತೋರಿಸಿ ನನ್ನ ಧ್ವನಿಯನ್ನು ಮುಚ್ಚಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ. ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ತಮ್ಮ ತಾಯಿಯ ಸ್ಮೃತಿ ಸ್ಥಳಕ್ಕೆ ಭೇಟಿ ನೀಡಿ, ಬೆಟ್ಟದ ಮೇಲೆ ದೇವರಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತೀವ್ರ ಪ್ರತಿಕ್ರಿಯೆ ನೀಡಿದರು.
“ನಾನು ಅಮೆರಿಕಕ್ಕೆ ಹೋಗುವ ಮುನ್ನ ಕೆಪಿಎಸ್ಸಿ, ಬಿದ್ದಿ ಟೌನ್ಶಿಪ್, ನೈಸ್ ಹಗರಣಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದೆ. ಇದು ಕೆಲವರ ಬುಡಕ್ಕೆ ನೀರು ಬರುವಂತೆ ಮಾಡಿದೆ. ಹೀಗಾಗಿ ನಮ್ಮ iಕುಟುಂಬದ ಬಾಯಿ ಮುಚ್ಚಿಸಲು ಜೈಲಿನ ವಿಷಯಗಳನ್ನು ತೇಲಿಬಿಡಲಾಗಿದೆ” ಎಂದು ಅವರು ಆರೋಪಿಸಿದರು.
“ಕೆಲವು ವಿಷಯಗಳನ್ನು ಸಾರ್ವಜನಿಕವಾಗಿ ಇಡುತ್ತೇನೆ ಎಂದು ಹೇಳಿದ್ದೇನೆ. ವಿರೋಧಿಗಳು ಎಷ್ಟೇ ಲಘುವಾಗಿ ಮಾತನಾಡಿದರೂ ನಾನು ಉದ್ವೇಗಕ್ಕೆ ಒಳಗಾಗುವುದಿಲ್ಲ. ದಾಖಲೆಗಳ ಸಮೇತ ನಾಡಿನ ಜನತೆಯ ಮುಂದೆ ಯಾವುದೇ ಅಂಜಿಕೆಯಿಲ್ಲದೆ ವಿಷಯಗಳನ್ನು ಇಡುತ್ತೇನೆ. ಇದು ನನ್ನ ತಂದೆಯಿಂದ ಬಂದ ಬಳುವಳಿ. ದಾಖಲೆಗಳಿಲ್ಲದೆ ನಾನು ಮಾತನಾಡುವುದಿಲ್ಲ” ಎಂದು ಸಚಿವರು ಸ್ಪಷ್ಟಪಡಿಸಿದರು.
ನೈಸ್ ಯೋಜನೆಯ ಗುತ್ತಿಗೆದಾರರು ಮತ್ತು ಮುಖ್ಯಮಂತ್ರಿಯ ಭೇಟಿಯ ಫೋಟೋಗಳನ್ನು ಗಮನಿಸಿರುವುದಾಗಿ ಹೇಳಿದ ಅವರು, “ಆ ಯೋಜನೆಯನ್ನು ಏನು ಮಾಡಲು ಹೊರಟಿದ್ದಾರೆ ಎಂಬುದರ ಬಗ್ಗೆ ಕೂಡ ಹೇಳಿದ್ದೇನೆ. ನಮ್ಮ ತಾಯಿ ಬದುಕಿದ್ದಾಗ ಆ ಹೆಣ್ಣುಮಗಳ ವಿರುದ್ಧ ಹೇಗೆ ಪಿತೂರಿ ನಡೆಸಿದ್ದಾರೆ ಎಂಬುದು ಈಗಿನ ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಒಂದು ಸುದ್ದಿ ವಾಹಿನಿಯನ್ನು ಬಳಸಿಕೊಂಡು ನಮ್ಮ ಕುಟುಂಬದ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ. ಅದಕ್ಕೆ ಕಾನೂನು ಮೂಲಕವೇ ಉತ್ತರ ಕೊಡುತ್ತೇವೆ. ಎಲ್ಲವನ್ನೂ ಕಾಲ ನಿರ್ಧರಿಸುತ್ತದೆ” ಎಂದು ಕಿಡಿಕಾರಿದರು.
ಕಳೆದ ಹತ್ತು ದಿನಗಳಲ್ಲಿ ಯಾರು ಎಷ್ಟರ ಮಟ್ಟಿಗೆ ನಿದ್ದೆಗೆಟ್ಟಿದ್ದಾರೆ ಎಂಬುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದ ಸಚಿವರು, “ಹಲವಾರು ಅಕ್ರಮ, ಸಾವಿರಾರು ಕೋಟಿ ಹಗರಣಗಳ ಬಗ್ಗೆ ಹೇಳಲು ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಂದು ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟಕ್ಕೆ ಬಂದು ದೇವರ ಆಶೀರ್ವಾದ ಕೇಳಿದ್ದೇನೆ. ಅಂತಿಮವಾಗಿ ತೀರ್ಪು ಅವನೇ ಕೊಡಬೇಕು” ಎಂದು ಮಾರ್ಮಿಕವಾಗಿ ಹೇಳಿದರು.
ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮರಂಗ – ಈ ನಾಲ್ಕು ಆಧಾರಸ್ತಂಭಗಳಲ್ಲಿ ಒಂದು ಅಲುಗಾಡಿದರೂ ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಅವಮಾನವಾಗುತ್ತದೆ ಎಂದು ಅವರು ಎಚ್ಚರಿಸಿದರು. “ಅಕ್ರಮಗಳ ಮೂಲಕ ಸುಲಭವಾಗಿ ಹಣ ಗಳಿಸಿ ಎಲ್ಲವನ್ನೂ ಪಡೆಯಬಹುದು ಎಂಬುದು ನಡೆಯುತ್ತಿದೆ. ಯಾವ ಸಮಯಕ್ಕೆ ಯಾವ ಹಗರಣವನ್ನು ಹೊರಗೆ ತರಬೇಕು ಎಂದು ಸಿದ್ಧತೆ ಮಾಡಿಕೊಂಡು ನಾಡಿನ ಜನತೆಯ ಮುಂದೆ ಬರುತ್ತೇನೆ. ದಾಖಲೆ ಸಮೇತ ಜನರ ಮುಂದೆ ಇಡುತ್ತೇನೆ. ಈ ರಾಜ್ಯವನ್ನು ಉಳಿಸುವ ನಿಟ್ಟಿನಲ್ಲಿ ಜನತೆ ಮತ್ತು ಸಂವಿಧಾನದ ನಾಲ್ಕು ಅಂಗಗಳು ತೀರ್ಮಾನ ಮಾಡಬೇಕು. ದೇವರ ಸನ್ನಿಧಾನದಲ್ಲಿ ಹೇಳುತ್ತೇನೆ – ನನಗೆ ಯಾರ ಮೇಲೆಯೂ ವೈಯಕ್ತಿಕ ಈರ್ಷೆಯಿಲ್ಲ” ಎಂದರು.
“ನಮ್ಮ ಜಾತಿಯವರು ಅಧಿಕಾರಕ್ಕೆ ಬಂದಿದ್ದಾರೆ, ಅಧಿಕಾರ ನಡೆಸಲಿ ಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ. ನಾನು ಯಾರಿಗೂ ತೊಂದರೆ ಕೊಡಲು ಹಗರಣಗಳನ್ನು ಪ್ರಸ್ತಾಪಿಸುತ್ತಿಲ್ಲ. ರಾಜ್ಯದ ಸಂಪತ್ತಿನ ಲೂಟಿ ತಡೆಯಲು ಹೋರಾಟ ನಡೆಸುತ್ತಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಲಿ, ಅವರಿಗೆ ಬೆಂಬಲ ನೀಡುತ್ತೇನೆ. ಅಧಿಕಾರ ದುರುಪಯೋಗ ಮಾಡಿಕೊಂಡು ನಡೆಯುತ್ತಿರುವ ಅಕ್ರಮಗಳ ಬಗ್ಗೆ ಹೇಳಲು ನಾನು ಹಿಂದೆ ಸರಿಯುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು.
ಕೆಪಿಎಸ್ಸಿ ಹಗರಣ, ಪಶುವೈದ್ಯರ ನೇಮಕಾತಿ, ಹುದ್ದೆಗಳ ಮಾರಾಟ, ಎಇಇಗಳ ಅಕ್ರಮ ನೇಮಕಾತಿ ಮೊದಲಾದವುಗಳನ್ನು ಉಲ್ಲೇಖಿಸಿ, “ಇವೆಲ್ಲವನ್ನೂ ನೋಡಿಕೊಂಡು ನಾನು ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಬೇಕಾ? ಅಕ್ರಮಗಳನ್ನು ಜನರ ಮುಂದೆಯೇ ಇಡುತ್ತೇನೆ. ಅವರೇ ತೀರ್ಮಾನ ಮಾಡುತ್ತಾರೆ. ನಾನು ಯಾರನ್ನು ಮೆಚ್ಚಿಸಲು ಹೋರಾಟ ನಡೆಸುತ್ತಿಲ್ಲ” ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ದೇವೇಗೌಡರ ಕುಟುಂಬದ ವಿರುದ್ಧ ಮಹಾಸಂಚು ಹೂಡಿದವರು ಯಾರು ಎಂಬುದು ರಾಜ್ಯಕ್ಕೆ ಗೊತ್ತಿದೆ ಎಂದು ನೆನಪಿಸಿದ ಅವರು, ನಾಗಮಂಗಲದ ಮಾಜಿ ಸಂಸದ ಎಲ್.ಆರ್. ಶಿವಾಮೇಗೌಡರ ಆಡಿಯೋವನ್ನು ಉಲ್ಲೇಖಿಸಿ, “ದೇವೇಗೌಡರ ಕುಟುಂಬವನ್ನು ತೀರಿಸುತ್ತೇವೆ, ಸರ್ಕಾರ ತೀರ್ಮಾನ ಮಾಡಿಬಿಟ್ಟಿದೆ ಎಂದು ಹೇಳಿದವನ ಹಿಂದೆ ಇದ್ದವರು ಯಾರು? ಈಗಿರುವ ಮುಖ್ಯಮಂತ್ರಿ ತಾನೇ? ಆ ವ್ಯಕ್ತಿಯನ್ನು ಬಂಧಿಸಿ ನಾಲ್ಕು ದಿನ ಜೈಲಿನಲ್ಲಿ ಇಟ್ಟಿದ್ದು ಯಾಕೆ?” ಎಂದು ಪ್ರಶ್ನಿಸಿದರು.
ಹಾಸನ ಪ್ರಕರಣದಲ್ಲಿ ಎರಡು ವರ್ಷದಿಂದ ಜೈಲಿನಲ್ಲಿರುವ ವ್ಯಕ್ತಿಯ ಬಳಿ ಈಗ ಮೊಬೈಲ್ ಮತ್ತು ಅಶ್ಲೀಲ ಚಿತ್ರಗಳಿರುವ ಪೆನ್ಡ್ರೈವ್ ಸಿಕ್ಕಿದೆ ಎಂಬ ಸುದ್ದಿಗಳನ್ನು ಟೀಕಿಸಿ, “ಎರಡು ವರ್ಷದಿಂದ ಫೋನ್ ಸಿಗಲಿಲ್ಲವೇ? ಜೈಲಿನಲ್ಲಿ ಇರುವವನಿಗೆ ಅಶ್ಲೀಲ ಚಿತ್ರ ಕೊಟ್ಟಿದ್ದು ಯಾರು? ಅದು ಎಲ್ಲಿಂದ ಒಳಕ್ಕೆ ಬಂತು? ಮೊಬೈಲ್ ಕೊಟ್ಟವರು ಯಾರು?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. “ನಮ್ಮ ಹೋರಾಟವನ್ನು ಹತ್ತಿಕ್ಕುವ ಏಕೈಕ ದುರುದ್ದೇಶದಿಂದ ಆ ಹುಡುಗನ ಹೆಸರನ್ನು ಮುಂದಕ್ಕೆ ತಂದು ನಮ್ಮ ಕುಟುಂಬದ ಮೇಲೆ ಅಪಪ್ರಚಾರ ನಡೆಸುತ್ತಿದ್ದಾರೆ. ನಿಮ್ಮ ಕೈಯಲ್ಲಿ ಬಾಯಿ ಮುಚ್ಚಿಸಲು ಆಗುತ್ತಾ?” ಎಂದು ಗುಡುಗಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಸೇರಿ ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡುವುದೇ ಮೊದಲ ಆದ್ಯತೆ ಎಂದು ಹೇಳಲಾಗಿದೆ ಎಂದು ಅವರು ಆರೋಪಿಸಿದರು. “ನಿಮ್ಮ ನಾಯಕ ದೆಹಲಿಯಿಂದ ಬಂದು 400 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ಹೇಳಿದ್ದ. ನೀವು ಎಷ್ಟು ಹೆಣ್ಣುಮಕ್ಕಳ ಕುಟುಂಬಗಳನ್ನು ಸರಿಮಾಡಿ ಕೊಟ್ಟಿದ್ದೀರಿ? ಎಷ್ಟು ಹೆಣ್ಣುಮಕ್ಕಳ ಮಾನ ಕಾಪಾಡಿದ್ದೀರಿ? ನ್ಯಾಯ, ಸತ್ಯಕ್ಕೆ ತಲೆ ಬಾಗುತ್ತೇನೆ. ತಪ್ಪು ಮಾಡಿದ್ದರೆ ತಲೆಬಾಗಲು ಸಿದ್ಧರಿದ್ದೇವೆ. ನಿಮ್ಮ ರೀತಿಯಲ್ಲಿ ದೋಚುವ ಕೆಲಸ ಮಾಡಲ್ಲ” ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
“ನನ್ನನ್ನು ಹೆದರಿಸುವುದು ನಿಮ್ಮ ಜನ್ಮದಲ್ಲಿ ಬರೆದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, “ವಿಜಯದಶಮಿ ಹತ್ತಿರದಲ್ಲೇ ಇದೆ. ಯುದ್ಧ ಆರಂಭಕ್ಕೆ ವಿಜಯದಶಮಿ ಸರಿಯಾದ ಸಮಯ” ಎಂದು ಹೇಳಿದರು.
ಡಿಕೆಶಿಯ ನೂರು ದಿನಗಳ ಆಡಳಿತವನ್ನು ಲೇವಡಿ ಮಾಡಿದ ಅವರು, “ಇವರು ನೂರು ದಿನ ಎಲ್ಲಿ ಆಡಳಿತ ನಡೆಸಿದ್ದಾರೆ? ವಿಧಾನಸೌಧದಲ್ಲಿ ಕುಳಿತು ಆಡಳಿತ ನಡೆಸಿದ್ದಕ್ಕಿಂತ ಹೈಕಮಾಂಡ್ ಮನೆ ಬಾಗಿಲಿಗೆ ಅಲೆದಾಟ ನಡೆಸಿದ್ದೇ ಹೆಚ್ಚು. ನೂರು ದಿನದಲ್ಲಿ ಮುಖ್ಯಮಂತ್ರಿಯಾದ ದಿನಾಂಕ, ಮಂತ್ರಿಮಂಡಲದ ಸಂಖ್ಯೆ, ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಎಲ್ಲವನ್ನೂ ತೆಗೆಯಿರಿ. ಪಟ್ಟಿ ತೆಗೆದು ಚರ್ಚೆ ಮಾಡೋಣ” ಎಂದು ಸವಾಲು ಹಾಕಿದರು.
ಹಿಂದೆ ವಿಧಾನಸೌಧದ ಮುಂದೆ ತೋರಿಸಿದ್ದ ಪೆನ್ಡ್ರೈವ್ನಲ್ಲಿ ಈಗಿನ ಮುಖ್ಯಮಂತ್ರಿಯ ಭ್ರಷ್ಟಾಚಾರದ ಮಾಹಿತಿ ಇತ್ತು ಎಂದು ಬಹಿರಂಗಪಡಿಸಿದ ಸಚಿವರು, “ನನಗೆ ಆತುರವಿಲ್ಲ. ಎಲ್ಲಾ ದಾಖಲೆಗಳನ್ನು ಕೊಡುತ್ತೇನೆ. ಈಗ ಯುದ್ಧ ಆರಂಭವಾಗಿದೆ. ಹೋರಾಟಕ್ಕೆ ಶಕ್ತಿ ಕೊಡು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ” ಎಂದು ಹೇಳಿದರು.











