ಬೆಂಗಳೂರು: “ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ. ನಾನು ಏಳನೇ ತರಗತಿಯಿಂದ ಶಾಸಕನಾಗುವವರೆಗೂ ಅನೇಕ ಅಡಚಣೆಗಳನ್ನು ಎದುರಿಸಿ ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದೇನೆ. ಯುವಕರು ನಾಯಕರಾಗಲು ಮುಂದೆ ಬರಬೇಕು. ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ವೈಯಕ್ತಿಕ ರಾಜಕೀಯ ಪ್ರಯಾಣದ ಅನುಭವಗಳನ್ನು ಹಂಚಿಕೊಂಡರು.

“ಏಳನೇ ತರಗತಿ ಶಾಲಾ ಚುನಾವಣೆ, ಕಾಲೇಜು ಚುನಾವಣೆಗಳಲ್ಲೂ ನನಗೆ ತಕ್ಕ ನ್ಯಾಯ ಸಿಗಲಿಲ್ಲ. ನಂತರ ವಿದ್ಯಾರ್ಥಿ ಕಾಂಗ್ರೆಸ್ ಚುನಾವಣೆಯ ಟಿಕೆಟ್ ತಪ್ಪಿಸಲಾಯಿತು. ಪದವಿ ಓದುವಾಗ ದೇವೇಗೌಡರ ವಿರುದ್ಧ ಸ್ಪರ್ಧಿಸುವ ಅವಕಾಶ ದೊರೆಯಿತು. ಆ ಚುನಾವಣೆಯಲ್ಲಿ ಸೋತೆ. ನಂತರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡು ಇಲ್ಲಿಯವರೆಗೆ ಪ್ರಯಾಣ ಬೆಳೆಸಿದ್ದೇನೆ” ಎಂದು ಅವರು ಹೇಳಿದರು.
ಎನ್ಪಿಎಸ್ ಶಾಲೆಯಲ್ಲಿ ಓದುವಾಗ ತುಂಟತನದ ಕಾರಣಕ್ಕೆ ಮುಂದಿನ ತರಗತಿಗೆ ಅವಕಾಶ ನೀಡದಿದ್ದುದರಿಂದ ಕಾರ್ಮೆಲ್ ಶಾಲೆಗೆ ಸೇರಿಸಲಾಯಿತು ಎಂದು ನೆನಪಿಸಿಕೊಂಡ ಅವರು, “ಅಲ್ಲಿ ಏಳನೇ ತರಗತಿಯಲ್ಲಿ ಚುನಾವಣೆಗೆ ನಿಂತಿದ್ದೆ. ನನ್ನ ಚಿಹ್ನೆ ನಕ್ಷತ್ರ. ನನಗೆ ಶೇ. 80ರಷ್ಟು ಮತಗಳು ಬಂದಿದ್ದರೂ ಶೇ. 20ರಷ್ಟು ಮತ ಗಳಿಸಿದ್ದ ಸಹಪಾಠಿ ಆರತಿ ಅವರನ್ನು ಶಾಲಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ನನಗೆ ಕ್ರೀಡಾ ಕಾರ್ಯದರ್ಶಿ ಹುದ್ದೆಯನ್ನು ಸೃಷ್ಟಿಸಿ ಕೊಟ್ಟರು” ಎಂದು ಹೇಳಿದರು.
ವಿದ್ಯಾವರ್ಧಕ ಕಾಲೇಜು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿದ್ದಾಗ, ದೇಶಪಾಂಡೆ ಅವರನ್ನು ನಿಲ್ಲಿಸಿ ತಾವೇ ಭಾಷಣ ಮಾಡಿ ಗೆಲ್ಲಿಸಿದ್ದುದನ್ನು ನೆನಪಿಸಿಕೊಂಡ ಅವರು, ನಾಯಕತ್ವ ಗುಣಗಳನ್ನು ಹೊಂದಿರುವವರಿಗೆ ಅಡಚಣೆಗಳು ಹೆಚ್ಚು ಎಂದು ಅಭಿಪ್ರಾಯಪಟ್ಟರು.

ಯುವ ಸಂಸತ್ತು ನಿರ್ಮಾಣ, ಶಾಲಾ-ಕಾಲೇಜುಗಳಲ್ಲಿ ಮಾದರಿ ಸಂಸತ್
ಯುವ ಸಂಸತ್ತು ನಿರ್ಮಾಣದ ಆಶಯದಿಂದ ಶಾಲಾ, ಕಾಲೇಜುಗಳಲ್ಲಿ ಮಾದರಿ ಸಂಸತ್ ನಡೆಸಲಾಗುವುದು ಎಂದು ಸಿಎಂ ತಿಳಿಸಿದರು. ಇದು ಬಸವಣ್ಣನವರ ಕಾಲದ ಅನುಭವ ಮಂಟಪದ ಚಿಂತನೆಗಳನ್ನು ಒಳಗೊಂಡಿದ್ದು, ವಿಶ್ವಕ್ಕೆ ಮೊದಲ ಸಂಸತ್ತು ಎಂದು ಖ್ಯಾತಿ ಪಡೆದ ಅನುಭವ ಮಂಟಪದ ತಿಳುವಳಿಕೆಯನ್ನು ಈ ಮೂಲಕ ನೀಡಲಾಗುವುದು ಎಂದರು.
ಪ್ರತಿ ಕಾಲೇಜಿನಲ್ಲಿ ಶಿಸ್ತುಬದ್ಧವಾಗಿ ಚುನಾವಣೆಗಳು ನಡೆಯಬೇಕು ಎಂದು ಘೋಷಿಸಿದ ಅವರು, “ಯಾರಲ್ಲಿ ಯಾವ ಕಿಡಿ ಇರುತ್ತದೆಯೋ ಗೊತ್ತಿಲ್ಲ. ಪ್ರತಿಯೊಬ್ಬರಿಗೂ ನಾಯಕತ್ವದ ಅವಕಾಶ ದೊರೆಯಬೇಕು. ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ” ಎಂದು ಹೇಳಿದರು.
ಪ್ರಜಾಪ್ರಭುತ್ವ ಭಾರತದ ಆತ್ಮ
“ಪ್ರಜಾಪ್ರಭುತ್ವ ಭಾರತದ ಆತ್ಮ. ಪ್ರಜೆಗಳೇ ಇಲ್ಲಿ ಪ್ರಭುಗಳು. ಭಾರತ ವಿಶ್ವಕ್ಕೆ ಪ್ರಜಾಪ್ರಭುತ್ವದ ಮಾದರಿಯನ್ನು ನೀಡಿದೆ. ಬಸವಣ್ಣನವರ ಅನುಭವ ಮಂಟಪವೇ ಇದಕ್ಕೆ ಮೂಲ. ನಾನು ಮುಖ್ಯಮಂತ್ರಿಯಾದ ಮೂರು ದಿನಗಳಲ್ಲೇ ಅನುಭವ ಮಂಟಪಕ್ಕೆ ಭೇಟಿ ನೀಡಿ ಅಲ್ಲಿಂದ ಸಿಎಂ ಪದವಿಯ ಪಯಣ ಆರಂಭಿಸಿದೆ” ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವ ಕೇವಲ ಮತದಾನಕ್ಕೆ ಸೀಮಿತವಲ್ಲ. ಘನತೆ, ಗೌರವ ಮತ್ತು ಬದುಕುವ ಹಕ್ಕನ್ನು ನೀಡುವುದು ನೈಜ ಪ್ರಜಾಪ್ರಭುತ್ವ ಎಂದು ಅವರು ಸ್ಪಷ್ಟಪಡಿಸಿದರು.

ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರ
“ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರ. ಸರ್ಕಾರ ಜನರನ್ನು ಗೌರವಿಸಿದಾಗ ಪ್ರಜಾಪ್ರಭುತ್ವವಾಗುತ್ತದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಹಿರಿಯರು ನಮಗೆ ಮಾರ್ಗದರ್ಶನ ಮಾಡಿದ್ದಾರೆ” ಎಂದು ಸಿಎಂ ಹೇಳಿದರು.
ಪ್ರಜಾಪ್ರಭುತ್ವದ ಮೇಲೆ ಬದ್ಧತೆ ಇರುವವರು ಮಾತ್ರ ಧೈರ್ಯವಾಗಿ ಮಾತನಾಡಲು ಸಾಧ್ಯ ಎಂದು ಅವರು ತಿಳಿಸಿದರು. ಭಾರತದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕಾಂಗ್ರೆಸ್ನ ಕೊಡುಗೆ ಎಂದು ಅವರು ನೆನಪಿಸಿದರು.

ಮೀಸಲಾತಿ ಕಾಪಾಡಿದ್ದು ಕಾಂಗ್ರೆಸ್ ಸರ್ಕಾರ
ಮೀಸಲಾತಿಯನ್ನು ಕಾಪಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದ ಅವರು, ಜನರ ಮತದಾನದ ಹಕ್ಕು ಉಳಿಯಬೇಕು ಎಂದು ಒತ್ತಿ ಹೇಳಿದರು. ಎಸ್ಐಆರ್ನಿಂದ ಒಂದು ಕೋಟಿ ಜನ ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. 47 ಲಕ್ಷ ಜನರಿಗೆ ಖಾಯಂ ನಿವಾಸ ಪತ್ರ ಹಾಗೂ ಆದಾಯ ಪತ್ರ ಒದಗಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಐದು ಗ್ಯಾರಂಟಿ ಯೋಜನೆಗಳಿಗೆ ಪ್ರತಿವರ್ಷ 52 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದ ಅವರು, ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಲಾಗಿದೆ ಎಂದು ತಿಳಿಸಿದರು. 10-15 ಲಕ್ಷ ನಿವೇಶನಗಳನ್ನು ಬಡವರಿಗೆ ಹಂಚುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅವರು ಹೇಳಿದರು.
“ಈ ಸರ್ಕಾರ ನಿಮ್ಮೊಂದಿಗಿರುತ್ತದೆ” ಎಂದು ಮುಕ್ತಾಯಗೊಳಿಸಿದ ಸಿಎಂ, ಸಾಂಸ್ಕೃತಿಕ, ಕ್ರೀಡೆ ಮತ್ತು ಕಲೆಗಳಿಗೆ ಪ್ರೋತ್ಸಾಹ ನೀಡಲು 10 ಸಾವಿರ ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.











