ನವದೆಹಲಿ: ದೇಶಾದ್ಯಂತ ಎಲೆಕ್ಟ್ರಿಕ್ ಬಸ್ಗಳು ಮತ್ತು ಎಲೆಕ್ಟ್ರಿಕ್ ಟ್ರಕ್ಗಳ ಬಳಕೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬ್ಯಾಂಕರುಗಳು ಮತ್ತು ಖಾಸಗಿ ವಲಯದ ವಾಣಿಜ್ಯ ವಾಹನ ಆಪರೇಟರ್ಗಳೊಂದಿಗೆ ಉನ್ನತ ಮಟ್ಟದ ಸಮಾಲೋಚನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಪಿಎಂ ಇ ಡ್ರೈವ್ ಯೋಜನೆಯಡಿ ಸರಕು ಸಾಗಣೆ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಗೆ ನಾಂದಿ ಹಾಡುವ ಉದ್ದೇಶದಿಂದ ಈ ಸಭೆಯನ್ನು ಸಚಿವಾಲಯದಲ್ಲಿ ಆಯೋಜಿಸಲಾಗಿತ್ತು. ಮಾಲಿನ್ಯಮುಕ್ತ ಸ್ವಚ್ಛ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವತ್ತ ಸರ್ಕಾರದ ಗಮನ ಕೇಂದ್ರೀಕೃತವಾಗಿದೆ.
ಸಭೆಯಲ್ಲಿ ಬ್ಯಾಂಕರುಗಳು ಮತ್ತು ಖಾಸಗಿ ಪಾಲುದಾರರು ಭಾಗವಹಿಸಿ, ಇ-ವಾಹನಗಳ ಕಾರ್ಯಾಚರಣೆಯ ಸವಾಲುಗಳು, ಆರ್ಥಿಕ ಸಮನ್ವಯತೆ ಮತ್ತು ವ್ಯಾಪಕ ಅಳವಡಿಕೆಗೆ ಬೇಕಾದ ನೀತಿ ಬೆಂಬಲಗಳ ಬಗ್ಗೆ ವಿಚಾರ ವಿನಿಮಯ ಮಾಡಿದರು. ಬೃಹತ್ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮ್ರನ್ ರಿಜ್ವಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ಡಾ. ಹನೀಫ್ ಖುರೇಷಿ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಮಾತನಾಡುವ ಸಂದರ್ಭದಲ್ಲಿ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು,
“ಎಲೆಕ್ಟ್ರಿಕ್ ಬಸ್ಗಳು ಪ್ರಯಾಣಿಕ ಸಾರಿಗೆಯ ಬೆನ್ನೆಲುಬಾಗುತ್ತಿವೆ. ಆದರೆ ಸುಸ್ಥಿರ ಸರಕು ಸಾಗಣೆಯಲ್ಲಿ ಇ-ಟ್ರಕ್ಗಳು ಪರಿವರ್ತನಾತ್ಮಕ ಪಾತ್ರ ವಹಿಸುತ್ತವೆ. ಪ್ರಧಾನಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸರ್ಕಾರ ಈ ಕ್ಷೇತ್ರಕ್ಕೆ ಭಾರೀ ಉತ್ತೇಜನ ನೀಡುತ್ತಿದೆ.”
“ಇ-ವಾಹನಗಳು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಸಾರಿಗೆ ವಲಯದಲ್ಲಿ ಹೊಸ ಯುಗವನ್ನೇ ಆರಂಭಿಸುತ್ತವೆ. ಬ್ಯಾಂಕರುಗಳು ಮತ್ತು ಖಾಸಗಿ ಪಾಲುದಾರರ ಸಹಕಾರದೊಂದಿಗೆ ಈ ಕ್ರಾಂತಿಯನ್ನು ವೇಗಗೊಳಿಸುವುದು ನಮ್ಮ ಗುರಿ” ಎಂದು ಅವರು ಒತ್ತಿ ಹೇಳಿದರು.
ಈ ಸಭೆಯು ಸರ್ಕಾರ ಮತ್ತು ಖಾಸಗಿ ವಲಯದ ನಡುವಿನ ಸಹಯೋಗವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಪಿಎಂ ಇ ಡ್ರೈವ್ ಯೋಜನೆಯ ಮೂಲಕ ದೇಶದ ಸಾರಿಗೆ ವ್ಯವಸ್ಥೆಯನ್ನು ಸುಸ್ಥಿರ, ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಬಲಿಷ್ಠಗೊಳಿಸುವತ್ತ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.










