ದೋಹಾ: ಕತಾರ್ನ ಯುಡಿಎಸ್ಟಿ ಕ್ರಿಕೆಟ್ ಮೈದಾನದಲ್ಲಿ ಹನ್ನೆರಡನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ (IDY 2026) ಅತ್ಯಂತ ಭವ್ಯ ಮತ್ತು ಉತ್ಸಾಹದ ವಾತಾವರಣದಲ್ಲಿ ಆಚರಿಸಲಾಯಿತು. “ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ” ಎಂಬ ಜಾಗತಿಕ ಧ್ಯೇಯವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮವು ಯೋಗದ ಮೂಲಕ ದೀರ್ಘಾಯುಷ್ಯ, ಚೈತನ್ಯ ಮತ್ತು ಆರೋಗ್ಯವನ್ನು ವೃದ್ಧಿಸುವ ಸಂದೇಶವನ್ನು ಎತ್ತಿ ಹಿಡಿಯಿತು.
ಭಾರತೀಯ ರಾಯಭಾರ ಕಚೇರಿ ಇಂಡಿಯನ್ ಸ್ಪೋರ್ಟ್ಸ್ ಸೆಂಟರ್ (ISC), ಇಂಡಿಯನ್ ಕಲ್ಚರಲ್ ಸೆಂಟರ್ (ICC), ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಮ್ (ICBF) ಮತ್ತು ಇಂಡಿಯನ್ ಬ್ಯುಸಿನೆಸ್ ಆಂಡ್ ಪ್ರೊಫೆಷನಲ್ಸ್ ಕೌನ್ಸಿಲ್ (IBPC) ಸಹಯೋಗದೊಂದಿಗೆ ಆಯೋಜಿಸಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಪ್ರವಾಸಿ ಸಮುದಾಯಗಳ ಸಾವಿರಾರು ಯೋಗಾಭ್ಯಾಸಿಗಳು ಭಾಗವಹಿಸಿದ್ದರು.

ರಾಜತಾಂತ್ರಿಕರು ಮತ್ತು ಕತಾರಿ ಗಣ್ಯರ ಉಪಸ್ಥಿತಿ
ಭಾರತದ ರಾಯಭಾರಿ ಗೌರವಾನ್ವಿತ ಶ್ರೀ ವಿಪುಲ್ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಶೋಭೆ ತಂದರು. ಕಾರ್ಯಕ್ರಮದಲ್ಲಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ರಾಯಭಾರಿ ಗೌರವಾನ್ವಿತ ಶ್ರೀ ಹಮ್ಮೂದಿ ಅಲ್-ಶೇಖ್, ಕಾರ್ಮಿಕ ಸಚಿವಾಲಯದ ಸಲಹೆಗಾರ ಶ್ರೀ ಖಾಲಿದ್ ಅಬ್ದುಲ್ ರೆಹಮಾನ್ ಅಲ್ ಫಕ್ರೂ, ಕತಾರ್ ಎನರ್ಜಿಯ ಹಿರಿಯ ಇಂಜಿನಿಯರ್ ಶ್ರೀ ಖಾಲಿದ್ ಅಲ್ ಫಕ್ರೂ, ಮನ್ನಾಯಿ ಕಾರ್ಪೊರೇಷನ್ ಅಧ್ಯಕ್ಷ ಶ್ರೀ ಅಬ್ದುಲ್ ಅಜೀಜ್ ಅಲ್ ಮನ್ನಾಯಿ ಮತ್ತು ಕತಾರ್ ಮಹಿಳಾ ಬಾಸ್ಕೆಟ್ಬಾಲ್ ತಂಡದ ಖ್ಯಾತ ಆಟಗಾರ್ತಿ ಮಿಸ್ ಆಲಾ ಸೊಲೈಮಾನ್ ಸೇರಿದಂತೆ ವಿವಿಧ ದೇಶಗಳ ರಾಜತಾಂತ್ರಿಕರು ಮತ್ತು ಕತಾರ್ನ ಉನ್ನತ ಗಣ್ಯರು ಉಪಸ್ಥಿತರಿದ್ದರು. ಇದು ಭಾರತ-ಕತಾರ್ ನಡುವಿನ ಗಾಢ ಸಾಂಸ್ಕೃತಿಕ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಭಾರತೀಯ ರಾಯಭಾರ ಕಚೇರಿಯ ಉನ್ನತ ಅಧಿಕಾರಿಗಳಾದ ಉಪ ರಾಯಭಾರಿ ಶ್ರೀ ಸಂದೀಪ್ ಕುಮಾರ್, ಪ್ರಥಮ ಕಾರ್ಯದರ್ಶಿ (ಆರ್ಥಿಕ ಮತ್ತು ವಾಣಿಜ್ಯ) ಶ್ರೀ ವೈಭವ್ ತಾಂಡ್ಲೆ, ಪ್ರಥಮ ಕಾರ್ಯದರ್ಶಿ (ಕಾರ್ಮಿಕ, ಸಮುದಾಯ ಕಲ್ಯಾಣ, ವೀಸಾ ಮತ್ತು ಒಸಿಐ) ಶ್ರೀ ಇಶ್ ಸಿಂಘಾಲ್ ಮತ್ತು ಪ್ರಥಮ ಕಾರ್ಯದರ್ಶಿ (ಶಿಕ್ಷಣ ಮತ್ತು ಸಂಸ್ಕೃತಿ) ಶ್ರೀ ಹರೀಶ್ ಪಾಂಡೆ ಅವರ ನಿರಂತರ ಮಾರ್ಗದರ್ಶನ ಮತ್ತು ಸಮರ್ಪಣೆಯಿಂದ ಕಾರ್ಯಕ್ರಮ ಯಶಸ್ವಿಯಾಯಿತು.
ಕರ್ನಾಟಕ ಸಂಘ ಕತಾರ್ನ ದಾಖಲೆಯ ಭಾಗವಹಿಸುವಿಕೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳಲ್ಲಿ ಕರ್ನಾಟಕ ಸಂಘ ಕತಾರ್ (KSQ) ಅತ್ಯಧಿಕ ಸಂಖ್ಯೆಯ ಸದಸ್ಯರೊಂದಿಗೆ ಮುಂಚೂಣಿಯಲ್ಲಿತ್ತು. ಸಂಘದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ವ್ಯವಸ್ಥಾಪಕ ಸಮಿತಿಯ ನೇತೃತ್ವದಲ್ಲಿ ಸದಸ್ಯರು ಭಾರಿ ಸಂಖ್ಯೆಯಲ್ಲಿ ಆಗಮಿಸಿ ಸಮೂಹ ಯೋಗಾಸನಗಳಲ್ಲಿ ಭಾಗವಹಿಸಿದರು.
ಈ ಅಭೂತಪೂರ್ವ ಭಾಗವಹಿಸುವಿಕೆಯನ್ನು ಭಾರತದ ರಾಯಭಾರಿ ಗೌರವಾನ್ವಿತ ಶ್ರೀ ವಿಪುಲ್ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದರು. ಸಮುದಾಯದಲ್ಲಿ ಆರೋಗ್ಯ, ಒಗ್ಗಟ್ಟು ಮತ್ತು ಯೋಗದ ಬಗ್ಗೆ ಬದ್ಧತೆಯನ್ನು ಉತ್ತೇಜಿಸುವ ಕರ್ನಾಟಕ ಸಂಘದ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಸಾಂಸ್ಕೃತಿಕ ಆಕರ್ಷಣೆ
ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದದ್ದು ಕರ್ನಾಟಕ ಸಂಘ ಕತಾರ್ ವತಿಯಿಂದ ನೀಡಲಾದ ‘ಸಾಂಸ್ಕೃತಿಕ ಯೋಗ ನೃತ್ಯ’ ಪ್ರದರ್ಶನ. ಅಶ್ವಿನಿ ಸಿ. ಬಿ., ನಿವೇದಾ ಸಿ. ಬಿ. ಮತ್ತು ಅಮೀರ್ ಜಹ್ರೌಯಿ ಅವರು ನಿರ್ದೇಶಿಸಿದ ಈ ನೃತ್ಯ ರೂಪಕವು ಯೋಗಾಸನಗಳನ್ನು ಭಾರತೀಯ ಸಂಸ್ಕೃತಿಯೊಂದಿಗೆ ಸುಂದರವಾಗಿ ಸಮ್ಮಿಳಿತಗೊಳಿಸಿತು. ವಿದೇಶಿ ರಾಜತಾಂತ್ರಿಕರು ಮತ್ತು ಗಣ್ಯರನ್ನು ಮಂತ್ರಮುಗ್ಧಗೊಳಿಸಿದ ಈ ಪ್ರದರ್ಶನವು ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.
ಈ ಯಶಸ್ವಿ ಕಾರ್ಯಕ್ರಮವು ಯೋಗವನ್ನು ಜೀವನಶೈಲಿಯ ಭಾಗವಾಗಿಸುವಲ್ಲಿ ಭಾರತೀಯ ಸಮುದಾಯದ ಸಮರ್ಪಣೆಯನ್ನು ಎತ್ತಿ ತೋರಿಸಿದೆ.










