ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನ ಹೆಚ್ಎಂಟಿ ಕ್ಯಾಂಪಸ್ನಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಗಗನಚುಂಬಿ ಕಟ್ಟಡಗಳ ಜಾಗವನ್ನು ಗುರುವಾರ ಸ್ವತಃ ಪರಿಶೀಲಿಸಿ, 1999-2004ರ ಅವಧಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ನಗರಾಭಿವೃದ್ಧಿ ಸಚಿವರ ನೇರ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿದರು.
ಹೆಚ್ಎಂಟಿ ಕಂಪನಿಗೆ ಸೇರಿದ 175 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿ ಖಾಸಗಿ ವ್ಯಕ್ತಿಗಳು ಭವ್ಯ ಅಪಾರ್ಟ್ಮೆಂಟ್ಗಳು ಮತ್ತು ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದ ಕುಮಾರಸ್ವಾಮಿ, ಅಕ್ವಿಲಾ ಹೈಟ್ಸ್, ಗೋವಿಯನು ಎರಿಟಿಸ್, ಪ್ರೆಸ್ಟೀಜ್ ಕೆನ್ಸಿಂಗ್ಟನ್ ಗಾರ್ಡನ್, ಕೆಕೆಆರ್ ಎಎಂಆರ್ ರುಬೆ ಅಪಾರ್ಟ್ಮೆಂಟ್ ಸೇರಿದಂತೆ ಹಲವು ಕಟ್ಟಡಗಳನ್ನು ಖುದ್ದಾಗಿ ಪರಿಶೀಲಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎಂದು ಹೇಳಿದ್ದವರ ಸರ್ಕಾರದಲ್ಲಿ ನಗರಾಭಿವೃದ್ಧಿ ಮಂತ್ರಿಯಾಗಿದ್ದವರೇ ಹೆಚ್ಎಂಟಿ ಭೂಮಿ ಲೂಟಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಇವತ್ತು ಬಿಡದಿ ಟೌನ್ಶಿಪ್ ಮಾಡುತ್ತೇನೆ ಎಂದು ಹೊರಟಿರುವ ಮಹಾನುಭಾವರೇ ಅಂದು ಈ ಜಾಗವನ್ನು ಖಾಸಗಿ ಶಕ್ತಿಗಳಿಗೆ ಕೊಡಿಸಿದ್ದಾರೆ,” ಎಂದು ಆರೋಪಿಸಿದರು.

ಈಶ್ವರ ಖಂಡ್ರೆಗೆ ಸವಾಲು:
ಅರಣ್ಯ ಭೂಮಿ ಎಂದು ಹೇಳುತ್ತಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ನೇರ ಸವಾಲು ಹಾಕಿದ ಕುಮಾರಸ್ವಾಮಿ, “ಹೆಚ್ಎಂಟಿ ಜಾಗದಲ್ಲಿ ಅಕ್ರಮವಾಗಿ ಕಬಳಿಸಿರುವವರಲ್ಲಿ ಈಶ್ವರ ಖಂಡ್ರೆ ಅವರ ಪಾಲು ಎಷ್ಟಿದೆ ಎಂದು ಹೇಳುವಿರಾ?” ಎಂದು ಪ್ರಶ್ನಿಸಿದರು.
ಹೆಚ್ಎಂಟಿ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಪಡೆಯುವ ತಾಕತ್ತು ಈಶ್ವರ ಖಂಡ್ರೆ ಅವರಿಗಿದೆಯೇ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
2006ರಲ್ಲಿ ನಾನು ತಡೆದಿದ್ದೇನೆ:
2006ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಕೂಡಲೇ ಹೆಚ್ಎಂಟಿ ಭೂಮಿ ಮಾರಾಟ ಮತ್ತು ನೋಂದಣಿ ನಿಲ್ಲಿಸುವ ಕಟ್ಟಾ ಆದೇಶ ಹೊರಡಿಸಿದ್ದಾಗಿ HDK ಹೇಳಿದರು. “ನನ್ನ ಕ್ರಮದಿಂದಲೇ ಇನ್ನೂ ಕೆಲವು ಜಾಗ ಉಳಿದಿದೆ. ಅಕ್ರಮವಾಗಿ ಕಟ್ಟಲಾಗಿರುವ ಅಪಾರ್ಟ್ಮೆಂಟ್ಗಳಿಗೆ ಇದುವರೆಗೂ ಖಾತೆಯೂ ಆಗಿಲ್ಲ,” ಎಂದು ತಿಳಿಸಿದರು.
ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ, “ಖಾತೆ ಕೊಡಿಸುವಂತೆ ಅರ್ಜಿ ಹಾಕಿರುವ ಫ್ಲ್ಯಾಟ್ ಮಾಲೀಕರಿಗೆ ಖಾತೆ ಏಕೆ ನೀಡುತ್ತಿಲ್ಲ? ನಿಮ್ಮದು ಬೇನಾಮಿ ಜಮೀನು ಎಂದು ಜನರು ಹೇಳುತ್ತಿದ್ದಾರೆ,” ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಹೆಚ್ಎಂಟಿಗೆ ಮರುಜೀವ ಕೊಡುವ ಪ್ರಯತ್ನ:
ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ಕೊಡುವುದಕ್ಕೆ ಡಿಪಿಆರ್ ಸಿದ್ಧವಾಗಿದೆ ಎಂದು ತಿಳಿಸಿದ ಕುಮಾರಸ್ವಾಮಿ, ರಾಜ್ಯ ಸರ್ಕಾರ ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು. ಅರಣ್ಯ ಭೂಮಿ ಎಂದು ಮಾಡುತ್ತಿರುವ ಅಪಪ್ರಚಾರವನ್ನು ಖಂಡಿಸಿದ ಅವರು, 1958-60ರಲ್ಲೇ ಹೆಚ್ಎಂಟಿ ಈ ಜಾಗವನ್ನು ನ್ಯಾಯಬದ್ಧವಾಗಿ ಖರೀದಿಸಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರೇಮಚಂದ್ ಮೌರ್ಯ, ಹೆಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದು, ವರದಿ ಬಂದ ಬಳಿಕ ಸೂಕ್ತ ತನಿಖೆ ನಡೆಸುವುದಾಗಿ ಘೋಷಿಸಿದರು.











