ಬೆಂಗಳೂರು: ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ರಫ್ತುಗಳನ್ನು ಗಣನೀಯವಾಗಿ ಹೆಚ್ಚಿಸುವುದು ನಿರ್ಣಾಯಕವಾಗಿದೆ ಎಂದು ವೋಲ್ವೊ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಹೇಳಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಆಯೋಜಿಸಿದ್ದ 2026ನೇ ಸಾಲಿನ 21ನೇ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಷ್ಟ್ರ ನಿರ್ಮಾಣದಲ್ಲಿ ರಫ್ತುದಾರರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ವಿವರಿಸಿದರು. “ದೇಶದ ರಫ್ತು ಕಡಿಮೆಯಾದಾಗ ಮತ್ತು ಆಮದು ಹೆಚ್ಚಾದಾಗ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಹೆಚ್ಚುತ್ತದೆ. ರುಪಾಯಿ ಮೌಲ್ಯ ಕುಸಿಯುತ್ತದೆ. ಆದರೆ ರಫ್ತು ಹೆಚ್ಚಾದಾಗ ಡಾಲರ್ ಮೌಲ್ಯ ಇಳಿಯುತ್ತದೆ ಮತ್ತು ರುಪಾಯಿ ಮೌಲ್ಯ ವೃದ್ಧಿಸುತ್ತದೆ. ಆದ್ದರಿಂದ ರಾಷ್ಟ್ರ ನಿರ್ಮಾಣ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ರಫ್ತುದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ” ಎಂದು ಕಮಲ್ ಬಾಲಿ ಹೇಳಿದರು.
ರಫ್ತು ಎಂದರೆ ಕೇವಲ ವಿದೇಶಕ್ಕೆ ಉತ್ಪನ್ನ ಮತ್ತು ಸೇವೆಗಳ ಮಾರಾಟದ ಅಂಕಿ-ಅಂಶಗಳು ಮಾತ್ರವಲ್ಲ. ಅದು ದೇಶದ ಜಿಡಿಪಿಗೆ ಮಹತ್ತ್ವದ ಕೊಡುಗೆ ನೀಡುತ್ತದೆ. ಎರಡನೇ ಮತ್ತು ಮೂರನೇ ಸ್ತರದ ನಗರಗಳು ಹಾಗೂ ಪಟ್ಟಣಗಳಿಂದಲೂ ಇತ್ತೀಚೆಗೆ ರಫ್ತು ಹೆಚ್ಚಳವಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.

ರಫ್ತುದಾರರು ಇಂದು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಲವು ದೇಶಗಳು ರಕ್ಷಣಾತ್ಮಕ ಧೋರಣೆ ತಾಳುತ್ತಿವೆ. ಭೌಗೋಳಿಕ ಸಂಘರ್ಷಗಳು ಮತ್ತು ಯುದ್ಧಗಳು ಜಾಗತಿಕ ವ್ಯಾಪಾರಕ್ಕೆ ಹೊಡೆತ ನೀಡುತ್ತಿವೆ. ಇಂತಹ ಸವಾಲುಗಳ ನಡುವೆಯೂ ಭಾರತವು ಹಲವಾರು ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್ಟಿಎ) ಏರ್ಪಡಿಸುವ ಮೂಲಕ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಭಾರತವು ಜಗತ್ತಿನ ಒಟ್ಟು ಜಿಡಿಪಿಯ ಸುಮಾರು 70 ಪ್ರತಿಶತಕ್ಕೆ ಸಮಾನವಾದ ದೇಶಗಳು ಮತ್ತು ಒಕ್ಕೂಟಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಇವುಗಳಿಂದ ರಫ್ತುದಾರರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಕೆಲವು ವಸ್ತುಗಳ ಆಮದು ಸಹ ಆಗುತ್ತದೆ. ಆದರೆ ಅವುಗಳ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯ ಉದ್ಯಮಿಗಳು ಮತ್ತು ರಫ್ತುದಾರರಿಗೆ ಇದೆ ಎಂದು ಅವರು ವಿವರಿಸಿದರು.
ರಫ್ತುದಾರರಿಗೆ ಕೆಲವು ಕಾರ್ಯತಂತ್ರಗಳನ್ನು ಸಲಹೆ ಮಾಡಿದ ಅವರು, “ರಫ್ತು ಎಂದರೆ ಸಮಗ್ರ ಮೌಲ್ಯ ವರ್ಧಿತ ಸರಣಿ. ತಮ್ಮದೇ ವಿನ್ಯಾಸ, ಉತ್ಪಾದನೆ, ವಿತರಣೆ ಮತ್ತು ರಫ್ತಿನ ಸಮಗ್ರ ಜಾಲವನ್ನು ಹೊಂದಬೇಕು. ಆಗ ಮಾತ್ರ ಉತ್ಪಾದನಾ ವಲಯವು ದೇಶದ ಜಿಡಿಪಿಗೆ 14 ಪ್ರತಿಶತಕ್ಕಿಂತ ಹೆಚ್ಚು ಕೊಡುಗೆ ನೀಡಬಲ್ಲುದು. ಅಂತಹ ಇಕೊಸಿಸ್ಟಮ್ ಅನ್ನು ನಿರ್ಮಿಸಲು ಎಲ್ಲರೂ ಪ್ರಯತ್ನಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಫ್ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ವಿ.ಟಿ.ಪಿ.ಸಿ. ಎಂ.ಡಿ. ರಮೇಶ್, ಚುನಾಯಿತ ಅಧ್ಯಕ್ಷ ಟಿ. ಸಾಯಿ ರಾಮ್ ಪ್ರಸಾದ್, ಚುನಾಯಿತ ಹಿರಿಯ ಉಪಾಧ್ಯಕ್ಷ ಬಿ.ಪಿ. ಶಶಿಧರ್, ರಫ್ತು ಪ್ರಶಸ್ತಿ ಸಮಿತಿ ಅಧ್ಯಕ್ಷ ಬಿ.ಎ. ಅಭಿಷೇಕ್, ನಿಕಟ ಪೂರ್ವ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ಪ್ರಶಸ್ತಿ ಸಮಿತಿ ಸಲಹೆಗಾರ ಜೆ. ಕ್ರಾಸ್ಟಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.











