ಅಧ್ಯಕ್ಷರ ಪರಮಾಧಿಕಾರಕ್ಕೆ ಕಡಿವಾಣ ಹಾಕಬೇಕು; ಭ್ರಷ್ಟಾಚಾರದ ಆರೋಪಗಳ ತನಿಖೆಯಾಗಲಿ | ಸರ್ಕಾರದ ಧನಸಹಾಯದ ನೆಪದಲ್ಲಿ ಹಸ್ತಕ್ಷೇಪ ಸಲ್ಲದು
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ವ್ಯಕ್ತಿ, ಅಧ್ಯಕ್ಷರು ಅಥವಾ ಸರ್ಕಾರದ ಸ್ವತ್ತು ಅಲ್ಲ. ಅದು ಸಮಸ್ತ ಕನ್ನಡಿಗರಿಗೆ ಸೇರಿದ ಸ್ವಾಯತ್ತ ಸಂಸ್ಥೆಯಾಗಿದ್ದು, ಅದರ ಮೂಲ ಆಶಯ ಮತ್ತು ಸ್ವಾಯತ್ತತೆಯನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬಾರದು ಎಂದು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ನಡೆದ ‘ನಮ್ಮ ಕನ್ನಡ ಸಾಹಿತ್ಯ ಪರಿಷತ್ತು: ಸಮಸ್ಯೆ, ಸವಾಲು, ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಸಾಪದ ಆಡಳಿತ ವ್ಯವಸ್ಥೆ, ಅಧ್ಯಕ್ಷರ ಅಧಿಕಾರ, ಸರ್ಕಾರದ ಹಸ್ತಕ್ಷೇಪ ಹಾಗೂ ಸಂಸ್ಥೆಯ ಸ್ವಾಯತ್ತತೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದರು.
‘ಕಸಾಪ ಅಧ್ಯಕ್ಷರದ್ದೂ ಅಲ್ಲ, ಸರ್ಕಾರದ್ದೂ ಅಲ್ಲ’
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಸ್ಥಾಪನೆಯಾದ ಸ್ವಾಯತ್ತ ಸಂಸ್ಥೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ತನ್ನ ಜೀವಶಕ್ತಿಯನ್ನು ಕಳೆದುಕೊಳ್ಳುತ್ತಿದ್ದು, ರಾಜಕೀಯ ಮತ್ತು ಅಧಿಕಾರದ ಪ್ರಭಾವಕ್ಕೆ ಒಳಗಾಗುತ್ತಿರುವಂತೆ ಕಾಣುತ್ತಿದೆ ಎಂದು ಚೆನ್ನಿ ಆತಂಕ ವ್ಯಕ್ತಪಡಿಸಿದರು.
ಪರಿಷತ್ತಿನಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಯಬೇಕು. ಅಧ್ಯಕ್ಷರ ಅಧಿಕಾರವನ್ನು ಕಡಿಮೆ ಮಾಡಿ, ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಬೇಕು ಎಂದು ಅವರು ಆಗ್ರಹಿಸಿದರು.
ಬೈಲಾ ತಿದ್ದುಪಡಿಗೆ ಸಾರ್ವಜನಿಕ ಚರ್ಚೆ ಅಗತ್ಯ
ಸಂವಿಧಾನದ ಮೂಲ ಸಂರಚನೆಯನ್ನು ಬದಲಿಸಲು ಸಾಧ್ಯವಿಲ್ಲದಂತೆ, ಕಸಾಪದ ಬೈಲಾದ ಮೂಲ ಸ್ವರೂಪಕ್ಕೂ ಧಕ್ಕೆಯಾಗಬಾರದು. ಪರಿಷತ್ತಿನ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡುವ ಮೊದಲು ಸಾರ್ವಜನಿಕವಾಗಿ ಚರ್ಚೆ ನಡೆಸಿ, ಸದಸ್ಯರು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖರ ಅಭಿಪ್ರಾಯ ಪಡೆಯಬೇಕು ಎಂದು ಚೆನ್ನಿ ಹೇಳಿದರು.
ಮಹೇಶ್ ಜೋಶಿ ಅವರ ಅವಧಿಯಲ್ಲಿ ಪರಿಷತ್ತಿನ ಬೈಲಾದಲ್ಲಿ ಮಾಡಲಾದ ಬದಲಾವಣೆಗಳು ಅಧ್ಯಕ್ಷರ ಅಧಿಕಾರವನ್ನು ಕೇಂದ್ರೀಕರಿಸಲು ಕಾರಣವಾಗಿವೆ ಎಂಬ ಆರೋಪವೂ ಕಾರ್ಯಕ್ರಮದಲ್ಲಿ ಕೇಳಿಬಂತು. ಇದರಿಂದ ಹಿಂದೆ ಇದ್ದ ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆ ದುರ್ಬಲಗೊಂಡು ವ್ಯಕ್ತಿ ಕೇಂದ್ರಿತ ಆಡಳಿತಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಚೆನ್ನಿ ಅಭಿಪ್ರಾಯಪಟ್ಟರು.
ಸರ್ಕಾರದ ಧನಸಹಾಯದ ಹೆಸರಿನಲ್ಲಿ ಹಸ್ತಕ್ಷೇಪ ಬೇಡ
ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಪರಿಷತ್ತು ಸರ್ಕಾರದ ಧನಸಹಾಯ ಪಡೆಯುತ್ತದೆ ಎಂಬ ಕಾರಣಕ್ಕೆ ಸರ್ಕಾರದ ಹಸ್ತಕ್ಷೇಪಕ್ಕೆ ಒಳಗಾಗಬಾರದು ಎಂದರು. ಪರಿಷತ್ತಿನ ಕಾರ್ಯಕ್ರಮಗಳು ಹಾಗೂ ಸಮ್ಮೇಳನಗಳಿಗೆ ಸರ್ಕಾರ ನೀಡುವ ಧನಸಹಾಯದ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಪರಿಷತ್ತಿನ ‘ಚಾಲಕರು’ ಮಾತ್ರ; ಅವರು ಸಂಸ್ಥೆಯ ‘ಮಾಲೀಕರು’ ಅಲ್ಲ. ಕನ್ನಡ ಭಾಷಿಕ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುವ ಮತ್ತು ರಾಜ್ಯದ ಭಾಷಾ-ಸಾಂಸ್ಕೃತಿಕ ಹಿತಾಸಕ್ತಿಗಳಿಗೆ ದನಿಯಾಗುವ ಪ್ರಾತಿನಿಧಿಕ ಸಂಸ್ಥೆಯಾಗಿ ಕಸಾಪ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
112 ವರ್ಷಗಳ ಇತಿಹಾಸದ ಸಂಸ್ಥೆಗೆ ಹೊಸ ಚಿಂತನೆ ಅಗತ್ಯ
ಲೇಖಕಿ ವಸುಂಧರಾ ಭೂಪತಿ ಮಾತನಾಡಿ, 112 ವರ್ಷಗಳ ಇತಿಹಾಸ ಹೊಂದಿರುವ ಕಸಾಪ ತನ್ನ ಮೂಲ ಆಶಯದಂತೆ ದೀರ್ಘಕಾಲ ಕಾರ್ಯನಿರ್ವಹಿಸಿದೆ. ಆದರೆ ಕಳೆದ ಒಂದು ದಶಕದಲ್ಲಿ ಅಧ್ಯಕ್ಷ ಸ್ಥಾನವು ಅಧಿಕಾರದ ದರ್ಪ ಪ್ರದರ್ಶಿಸುವ ವೇದಿಕೆಯಾಗಿ ಮಾರ್ಪಟ್ಟಿರುವ ಆರೋಪಗಳು ಕೇಳಿಬರುತ್ತಿವೆ ಎಂದರು.
ರಂಗಾಯಣದ ರಂಗ ಸಮಾಜಗಳ ಮಾದರಿಯಲ್ಲಿ ಕಸಾಪದಲ್ಲೂ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.
ಮಹಿಳೆಯರು, ದಲಿತರು, ಹಿಂದುಳಿದವರಿಗೆ ಅವಕಾಶ ಕಲ್ಪಿಸಬೇಕು
ಪರಿಷತ್ತಿನ ಆಡಳಿತದಲ್ಲಿ ಮಹಿಳೆಯರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಪ್ರತಿನಿಧಿತ್ವ ಹೆಚ್ಚಬೇಕು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು. ಬೈಲಾದಲ್ಲಿ ಅಗತ್ಯ ತಿದ್ದುಪಡಿ ಮಾಡಿ ಅಧ್ಯಕ್ಷ ಸ್ಥಾನ ಸೇರಿದಂತೆ ಪ್ರಮುಖ ಜವಾಬ್ದಾರಿಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.
ಕಸಾಪ ಯಾವುದೇ ಪಕ್ಷದ ರಾಜಕೀಯ ವೇದಿಕೆಯಾಗದೆ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡಿಗರ ಹಿತಾಸಕ್ತಿಗಳಿಗಾಗಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿ ಉಳಿಯಬೇಕು ಎಂಬುದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಸಾಹಿತಿಗಳು, ಪತ್ರಕರ್ತರು ಮತ್ತು ಹೋರಾಟಗಾರರ ಒಟ್ಟಾರೆ ಅಭಿಪ್ರಾಯವಾಗಿತ್ತು.
ಕಾರ್ಯಕ್ರಮದಲ್ಲಿ ಅಗ್ರಹಾರ ಕೃಷ್ಣಮೂರ್ತಿ, ಎಚ್.ಎಲ್. ಪುಷ್ಪಾ, ಆರ್.ಜಿ. ಹಳ್ಳಿ ನಾಗರಾಜ್, ಎಂ.ಎ. ಪೊನ್ನಪ್ಪ, ಬಿ.ಎಂ. ಹನೀಫ್, ಪ್ರದೀಪ್ ಮಾಲ್ಗುಡಿ, ಸಿ.ಕೆ. ರಾಮೇಗೌಡ, ಸಂಧ್ಯಾರೆಡ್ಡಿ ಮಾವಳ್ಳಿ, ಶಂಕರ್, ಮಂಜುಳಾ ಶಿವಾನಂದ್, ವಿಜಯಕುಮಾರ್, ಭಕ್ತರಹಳ್ಳಿ ಕಾಮರಾಜ್, ಕರೀಗೌಡ ಬೀಚನಹಳ್ಳಿ, ಪಾರ್ವತೀಶ ಬಿಳಿದಾಳೆ ಸೇರಿದಂತೆ ಹಲವು ಸಾಹಿತಿಗಳು, ಪತ್ರಕರ್ತರು ಮತ್ತು ಸಂಘಟಕರು ಪಾಲ್ಗೊಂಡಿದ್ದರು.











