‘ಕ್ಯಾಮೆರಾ ಕಣ್ಣಲ್ಲಿ ದಾಖಲಾಗುವ ಚಿತ್ರ ಇತಿಹಾಸದ ಸಾಕ್ಷಿ’; ಎಐ ಬಂದ ಬಳಿಕ ನಿಜ–ನಕಲಿ ಪತ್ತೆ ಸವಾಲು
ಬೆಂಗಳೂರು: ಒಂದು ಛಾಯಾಚಿತ್ರ ಕೇವಲ ಚಿತ್ರವಲ್ಲ; ಅದು ವ್ಯಕ್ತಿಯ ಬದುಕು, ಸಮಾಜದ ಬೆಳವಣಿಗೆ ಹಾಗೂ ಕಾಲಘಟ್ಟದ ಇತಿಹಾಸವನ್ನು ದಾಖಲಿಸುವ ಮಹತ್ವದ ಸಾಕ್ಷಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್ತಿನಲ್ಲಿ ಛಾಯಾಗ್ರಾಹಕರ ಸಂಘ ಬೆಂಗಳೂರು (ರಿ.) / ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ ಬೆಂಗಳೂರು ವತಿಯಿಂದ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಆಯೋಜಿಸಿದ್ದ ‘ಫ್ರೋಜನ್ ಮೆಮೊರೀಸ್’ ಛಾಯಾಚಿತ್ರ ಪ್ರದರ್ಶನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪ್ರದರ್ಶನದಲ್ಲಿದ್ದ ಅರ್ಥಪೂರ್ಣ ಚಿತ್ರಗಳನ್ನು ವೀಕ್ಷಿಸಿ ತಾವೂ ಕ್ಯಾಮೆರಾ ಹಿಡಿದು ಒಂದು ಫೋಟೋ ಕ್ಲಿಕ್ ಮಾಡಿದರು. ಸಮಾಜದ ನೈಜ ಪ್ರತಿಬಿಂಬವನ್ನು ಕ್ಯಾಮೆರಾ ಕಣ್ಣುಗಳ ಮೂಲಕ ಸೆರೆಹಿಡಿದು ಜನರಿಗೆ ತಲುಪಿಸುವ ಎಲ್ಲಾ ಫೋಟೋ ಜರ್ನಲಿಸ್ಟ್ ಹಾಗೂ ಛಾಯಾಗ್ರಾಹಕರ ಶ್ರಮ ಮತ್ತು ಪ್ರತಿಭೆಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

“ನಿಮ್ಮದೊಂದು ಚಿತ್ರ ಒಂದು ವರ್ಷದ್ದಾಗಿರಬಹುದು, 50, 100 ವರ್ಷದ್ದಾಗಿರಬಹುದು ಅಥವಾ ಅದಕ್ಕಿಂತಲೂ ಹಳೆಯದಾಗಿರಬಹುದು. ಆದರೆ ಅದು ಒಬ್ಬ ವ್ಯಕ್ತಿಯ ಇತಿಹಾಸವನ್ನು ಬರೆಯುವಂತ ಸಾಕ್ಷಿಯಾಗುತ್ತದೆ. ಒಂದು ಚಿತ್ರ ಸಣ್ಣದು ಎಂದು ಭಾವಿಸಬಾರದು. ನಮ್ಮ ಬದುಕಿನಲ್ಲಿ ನಡೆದ ಘಟನೆಗಳಿಗೆ ಸಾಕ್ಷಿ ಏನು ಎಂಬುದನ್ನು ತೋರಿಸುವಲ್ಲಿ ಛಾಯಾಚಿತ್ರದ ಪಾತ್ರ ಬಹಳ ದೊಡ್ಡದು,” ಎಂದು ಅವರು ಹೇಳಿದರು.
ಒಂದು ಚಿತ್ರ ನೂರಾರು ಅರ್ಥಗಳನ್ನು ನೀಡಬಲ್ಲದು. ಕಾಲ ಕಳೆದಂತೆ ಅದರ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಛಾಯಾಗ್ರಾಹಕರು ಸೆರೆಹಿಡಿಯುವ ಪ್ರತಿಯೊಂದು ದೃಶ್ಯವೂ ಭವಿಷ್ಯದ ಪೀಳಿಗೆಗೆ ದಾಖಲೆಯಾಗಬಹುದು ಎಂದು ಅವರು ತಿಳಿಸಿದರು.

ಕಣ್ಣಾರೆ ಕಂಡದ್ದಕ್ಕೆ ಹೆಚ್ಚಿನ ನಂಬಿಕೆ
ಅಕ್ಬರ್–ಬೀರಬಲ್ ಕಥೆಯನ್ನು ಉದಾಹರಣೆಯಾಗಿ ನೀಡಿದ ಅವರು, “ಕಿವಿಗೂ ಕಣ್ಣಿಗೂ ಎಷ್ಟು ದೂರ?” ಎಂದು ಅಕ್ಬರ್ ಪ್ರಶ್ನಿಸಿದಾಗ ಬೀರಬಲ್ ನಾಲ್ಕು ಬೆರಳು ಎಂದು ಉತ್ತರಿಸುತ್ತಾನೆ. ಆದರೆ ಈ ನಾಲ್ಕು ಬೆರಳಿನ ಅಂತರ ಕೇವಲ ದೈಹಿಕ ಅಂತರವಲ್ಲ; ಕಿವಿಯಿಂದ ಕೇಳುವ ಸುದ್ದಿ ಮತ್ತು ಕಣ್ಣಿನಿಂದ ಕಾಣುವ ಸತ್ಯದ ನಡುವಿನ ವ್ಯತ್ಯಾಸದ ಸಂಕೇತವಾಗಿದೆ. ಜನರು ಕಣ್ಣಾರೆ ಕಂಡ ದೃಶ್ಯಕ್ಕೆ ಹೆಚ್ಚಿನ ನಂಬಿಕೆ ನೀಡುತ್ತಾರೆ ಎಂದರು.
“ಕಿವಿಯಿಂದ ಕೇಳುವುದಕ್ಕಿಂತ ಕಣ್ಣಿನಿಂದ ನೋಡುವುದಕ್ಕೆ ಜನರು ಹೆಚ್ಚಿನ ನಂಬಿಕೆ ಇಡುತ್ತಾರೆ. ಮಾಧ್ಯಮದಲ್ಲೂ ಇದೇ ಕಾರಣಕ್ಕೆ ಚಿತ್ರಕ್ಕೆ ಬಹಳ ಮಹತ್ವವಿದೆ. ಪತ್ರಿಕೆಯಲ್ಲಿ ಎಷ್ಟೇ ಆಳವಾದ ವಾಸ್ತವಾಂಶಗಳನ್ನು ಪ್ರಕಟಿಸಿದರೂ, ಅದರೊಂದಿಗೆ ಸೂಕ್ತ ಚಿತ್ರವಿಲ್ಲದಿದ್ದರೆ ಓದುಗರ ಮೇಲೆ ಸುದ್ದಿಯ ಪರಿಣಾಮ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ದೃಶ್ಯ ಮಾಧ್ಯಮಗಳು ವೇಗವಾಗಿ ಬೆಳೆದಿವೆ,” ಎಂದು ವಿವರಿಸಿದರು.

ಟಿವಿ, ಸಾಮಾಜಿಕ ಮಾಧ್ಯಮದ ಬೆಳವಣಿಗೆಗೆ ಚಿತ್ರವೇ ಕಾರಣ
“ಯಾವುದೇ ಪತ್ರಿಕೆಯಾಗಿರಲಿ, ಎಷ್ಟೇ ಆಳವಾಗಿ ವಾಸ್ತವಾಂಶ ಬರೆದಿದ್ದರೂ ಅದರೊಂದಿಗೆ ಒಂದು ಚಿತ್ರ ಇಲ್ಲದಿದ್ದರೆ ಆ ಸುದ್ದಿಯ ಬೆಲೆ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಟಿವಿ ಮಾಧ್ಯಮ ಇಷ್ಟು ದೊಡ್ಡ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆದಿದೆ. ನಂತರ ಸಾಮಾಜಿಕ ಮಾಧ್ಯಮವೂ ವೇಗವಾಗಿ ಬೆಳೆಯಿತು. ಟಿವಿಯಲ್ಲಿ ಜನರು ಕಣ್ಣಾರೆ ನೋಡುವ ಚಿತ್ರಗಳನ್ನು ಹೆಚ್ಚು ನಂಬುತ್ತಾರೆ,” ಎಂದು ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಿದ್ದರೂ ಅವರ ವ್ಯಾಪ್ತಿ ಅಪಾರವಾಗಿದೆ. ಸ್ಥಳೀಯವಾಗಿ ತೆಗೆದ ಒಂದು ಚಿತ್ರ ಕೆಲವೇ ಕ್ಷಣಗಳಲ್ಲಿ ರಾಜ್ಯದಾದ್ಯಂತ, ದೇಶದಾದ್ಯಂತ ಹಾಗೂ ಜಗತ್ತಿನಾದ್ಯಂತ ತಲುಪುವ ಸಾಮರ್ಥ್ಯ ಹೊಂದಿದೆ ಎಂದರು.
‘ನಿಮ್ಮ ಕ್ಯಾಮೆರಾದ ಮೇಲೆ ನಮಗೆ ನಂಬಿಕೆ ಇದೆ’
“ನೀವು ಇಲ್ಲಿ 40 ಜನ ಇರಬಹುದು, 100 ಜನ ಇರಬಹುದು ಅಥವಾ 4,000 ಜನ ಇರಬಹುದು. ಆದರೆ ನಿಮ್ಮ ಕ್ಯಾಮೆರಾದ ಮೂಲಕ ಹೊರಬರುವ ಚಿತ್ರಗಳನ್ನು ರಾಜ್ಯದ ಏಳು ಕೋಟಿ ಜನರು ನೋಡುತ್ತಾರೆ. ನಿಮ್ಮ ಸಂದೇಶ ಮತ್ತು ಚಿತ್ರಗಳು ಇಡೀ ವಿಶ್ವವನ್ನೇ ತಲುಪುತ್ತವೆ. ಹೀಗಾಗಿ ನಿಮ್ಮ ಕ್ಯಾಮೆರಾದ ಮೇಲೆ ನಮಗೆ ನಂಬಿಕೆ ಇದೆ,” ಎಂದು ಭರವಸೆ ನೀಡಿದರು.
ಮಾಧ್ಯಮ ಕ್ಷೇತ್ರದಲ್ಲಿ ಛಾಯಾಗ್ರಾಹಕರು ತೋರಿಸುವ ಸೃಜನಶೀಲತೆಯನ್ನು ಪ್ರಶಂಸಿಸಿದ ಅವರು, ಜೆಸಿಬಿ ಪಕ್ಕದಲ್ಲಿ ಚಿರತೆ ಕಾಣಿಸಿಕೊಂಡಿದ್ದ ಅಪರೂಪದ ಚಿತ್ರದಂತಹ ಉದಾಹರಣೆಗಳನ್ನು ನೆನಪಿಸಿಕೊಂಡರು. ಯಾವುದು ಮುಖ್ಯ, ಯಾವ ಕ್ಷಣವನ್ನು ಸೆರೆಹಿಡಿಯಬೇಕು ಎಂಬುದನ್ನು ಕ್ಷಣಾರ್ಧದಲ್ಲಿ ನಿರ್ಧರಿಸುವ ಸಾಮರ್ಥ್ಯ ಬಹಳ ಮುಖ್ಯ ಎಂದು ಹೇಳಿದರು.

ಮಾಧ್ಯಮದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ
ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ಸಿಎಂ ಹೇಳಿದರು. “ನಿಮ್ಮ ಬೇಡಿಕೆಗಳನ್ನು ಈಗಾಗಲೇ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. ನೀವು ಕೂಡ ನನ್ನನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಗಳನ್ನು ಹೇಳಿದ್ದೀರಿ. ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ಎಲ್ಲರಿಗೂ ಒಂದೇ ರೀತಿಯಲ್ಲಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನು ನಾನು ಖಂಡಿತವಾಗಿ ಆಲೋಚಿಸುತ್ತೇನೆ. ನಿಮ್ಮ ಸಮಸ್ಯೆಗಳು ಏನು ಎಂಬುದು ನನಗೆ ಅರಿವಿದೆ. ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಕಾನೂನು ಚೌಕಟ್ಟಿನೊಳಗೆ ನಿಮಗೆ ಯಾವ ರೀತಿಯಲ್ಲಿ ನೆರವು ನೀಡಲು ಸಾಧ್ಯವೋ ಅದನ್ನು ಖಂಡಿತವಾಗಿ ಮಾಡುವ ಬಗ್ಗೆ ಪರಿಶೀಲಿಸುತ್ತೇನೆ,” ಎಂದು ಭರವಸೆ ನೀಡಿದರು.
ಪೊಲೀಸ್–ಮಾಧ್ಯಮ ಸಮನ್ವಯ ಅಗತ್ಯ
ಪ್ರತಿಭಟನೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸೂಕ್ಷ್ಮ ಸಂದರ್ಭಗಳಲ್ಲಿ ಛಾಯಾಗ್ರಾಹಕರು ಎದುರಿಸುವ ಸಮಸ್ಯೆಗಳ ಬಗ್ಗೆಯೂ ಪ್ರಸ್ತಾಪಿಸಿದ ಅವರು, “ನಮ್ಮ ಪೊಲೀಸರು ಅವರ ಕರ್ತವ್ಯ ಮಾಡಬೇಕಾಗುತ್ತದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮಾಧ್ಯಮದವರು ಕೂಡ ತಮ್ಮ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಕೆಲವೊಮ್ಮೆ ಪೊಲೀಸರು ಹಿಂದೆ ಸರಿಯುವಂತೆ ಮಾಡಿದಾಗ ಛಾಯಾಗ್ರಾಹಕರು ಬಿದ್ದು ಗಾಯಗೊಳ್ಳುವ, ಕೈ–ಕಾಲಿಗೆ ತೊಂದರೆಯಾಗುವ ಹಾಗೂ ಕ್ಯಾಮೆರಾಗಳು ಹಾನಿಗೊಳಗಾಗುವ ಸಂದರ್ಭಗಳಿವೆ,” ಎಂದು ಹೇಳಿದರು. ಪೊಲೀಸರ ಕರ್ತವ್ಯ ಮತ್ತು ಮಾಧ್ಯಮದ ಕರ್ತವ್ಯ ಎರಡನ್ನೂ ಗೌರವಿಸುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಶಿಸ್ತಿನ ಹಾಗೂ ಸಮನ್ವಯದ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ನಾಲ್ಕು ದಶಕಗಳ ಹಿಂದಿನ ಚಿತ್ರಕ್ಕೂ ಬೆಲೆ; ಮೊಬೈಲ್ ಮತ್ತು ಎಐ ಸವಾಲು
ತಮ್ಮ ಕಾಲೇಜು ದಿನಗಳ ಸುಮಾರು 40–45 ವರ್ಷಗಳ ಹಿಂದಿನ (1981ರ ಸುಮಾರಿನ) ಚಿತ್ರವೊಂದನ್ನು ಹುಡುಕುತ್ತಿರುವುದಾಗಿ ಹೇಳಿದ ಅವರು, ನಾಲ್ಕು ದಶಕಗಳ ಹಿಂದಿನ ಒಂದು ಚಿತ್ರ ಇಂದು ಸಿಕ್ಕರೂ ಅದು ಬಹಳ ಅಮೂಲ್ಯ ಎಂದರು.
ಮೊಬೈಲ್ ಫೋನ್ಗಳಲ್ಲೇ ಅತ್ಯಾಧುನಿಕ ಕ್ಯಾಮೆರಾಗಳು ಲಭ್ಯವಾಗುತ್ತಿರುವುದರಿಂದ ವೃತ್ತಿಪರ ಛಾಯಾಗ್ರಾಹಕರಿಗೆ ಸ್ಪರ್ಧೆ ಹೆಚ್ಚಾಗಿದೆ ಎಂದು ಹೇಳಿದರು. “ಮೊಬೈಲ್ ಫೋನ್ಗಳು ಬಂದ ನಂತರ ಮಾರುಕಟ್ಟೆಯಲ್ಲಿ ಬಹಳ ಬದಲಾವಣೆಯಾಗಿದೆ. ₹10 ಸಾವಿರದಿಂದ ₹1 ಲಕ್ಷದವರೆಗಿನ ಫೋನ್ಗಳಲ್ಲೇ ಉತ್ತಮ ಗುಣಮಟ್ಟದ ಕ್ಯಾಮೆರಾಗಳಿವೆ. ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ಆದರೆ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ವೃತ್ತಿಪರ ಛಾಯಾಗ್ರಾಹಕರ ಅನುಭವ, ಸೃಜನಶೀಲತೆ ಮತ್ತು ಸುದ್ದಿಯ ಮಹತ್ವವನ್ನು ಗುರುತಿಸುವ ಸಾಮರ್ಥ್ಯಕ್ಕೆ ಪರ್ಯಾಯವಿಲ್ಲ,” ಎಂದರು.
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನೈಜ ಹಾಗೂ ಕೃತಕವಾಗಿ ಸೃಷ್ಟಿಸಲಾದ ಚಿತ್ರಗಳ ನಡುವಿನ ವ್ಯತ್ಯಾಸ ಗುರುತಿಸುವುದು ದೊಡ್ಡ ಸವಾಲಾಗಲಿದೆ ಎಂದು ಎಚ್ಚರಿಸಿದರು. “ಒಂದು ಚಿತ್ರವನ್ನು ಬದಲಿಸಿ ಮತ್ತೊಂದು ರೀತಿಯಲ್ಲಿ ಸೃಷ್ಟಿಸುವುದು ಈಗ ಸಾಧ್ಯವಾಗಿದೆ. ನಿಜವಾದ ಚಿತ್ರ ಯಾವುದು, ಕೃತಕವಾಗಿ ಸೃಷ್ಟಿಸಿದ ಚಿತ್ರ ಯಾವುದು ಎಂಬುದನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಕಳುಹಿಸಿ ನಿಜ ಯಾವುದು, ಸುಳ್ಳು ಯಾವುದು ಎಂಬುದನ್ನು ಪತ್ತೆಹಚ್ಚಬೇಕಾದ ಪರಿಸ್ಥಿತಿ ಬರಬಹುದು. ತಂತ್ರಜ್ಞಾನದಿಂದ ಸವಾಲುಗಳು ಹೆಚ್ಚಾದರೂ ನಂಬಿಕೆಗೆ ಅರ್ಹವಾದ ಪತ್ರಿಕೋದ್ಯಮ ಮತ್ತು ವೃತ್ತಿಪರ ಛಾಯಾಗ್ರಹಣದ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ,” ಎಂದು ಹೇಳಿದರು.
‘ಮಾಧ್ಯಮ ರಾಜಕೀಯದ ಸಮಾನಾಂತರ ಶಕ್ತಿ’
ಮಾಧ್ಯಮವು ರಾಜಕೀಯ ವ್ಯವಸ್ಥೆಯ ಸಮಾನಾಂತರ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. “ನಾನು ಮುಖ್ಯಮಂತ್ರಿ ಆಗಿರುವುದು ಮುಖ್ಯವಲ್ಲ. ರಾಜಕೀಯದಲ್ಲಿ ಪ್ರತಿಯೊಬ್ಬರ ಬದುಕಿನಲ್ಲೂ ನೀವು ಸಮಾನಾಂತರವಾಗಿ ಬೆಂಬಲವಾಗಿ ನಿಂತಿದ್ದೀರಿ. ಜನರನ್ನು ಬೆಳೆಸಿದ್ದೀರಿ, ನಾಯಕರನ್ನು ಬೆಳೆಸಿದ್ದೀರಿ. ಸಮಾಜದಲ್ಲಿ ನಡೆಯುವ ಘಟನೆಗಳನ್ನು ದಾಖಲಿಸುವ ಮೂಲಕ ಇತಿಹಾಸವನ್ನು ಕಟ್ಟಿಕೊಟ್ಟಿದ್ದೀರಿ. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ನಿಮಗೆ ಒಳ್ಳೆಯದಾಗಬೇಕು, ನಿಮ್ಮ ಕಾರ್ಯಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ,” ಎಂದು ಅಭಿನಂದಿಸಿದರು.











